Top Newsಸುದ್ದಿ

ಕೆಪಿಎಸ್‌ಸಿ ಅಕ್ರಮದ ವಿರುದ್ಧ ಸ್ಟೂಡೆಂಟ್ಸ್ ಹೋರಾಟಕ್ಕೆ ಮೊದಲ ಗೆಲುವು!

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಾಮಾಣಿಕ ವಿದ್ಯಾರ್ಥಿಗಳ ನಿರಂತರ ಹೋರಾಟಕ್ಕೆ ಈಗ ಮೊದಲ ಜಯ ಸಿಕ್ಕಿದೆ. 2023-24ನೇ ಸಾಲಿನ 384 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಆಯೋಗವು ಮಾರ್ಚ್ 23 ರಿಂದ ನಿಗದಿಯಾಗಿದ್ದ ಸಂದರ್ಶನ ಮತ್ತು ದಾಖಲೆ ಪರಿಶೀಲನೆಯನ್ನು ಅಧಿಕೃತವಾಗಿ ತಡೆಹಿಡಿದಿದೆ.

ಒಂದೇ ಪರೀಕ್ಷಾ ಕೇಂದ್ರದ, ಒಂದೇ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದ 11ಕ್ಕೂ ಹೆಚ್ಚು ಅಭ್ಯರ್ಥಿಗಳು ಒಟ್ಟಾಗಿ ತೇರ್ಗಡೆಯಾಗಿರುವುದು ವ್ಯವಸ್ಥಿತ ಅಕ್ರಮದ ಸಂಶಯವನ್ನು ಬಲಪಡಿಸಿತ್ತು. ಈ ಅನಿರೀಕ್ಷಿತ ಫಲಿತಾಂಶವು ಸಾವಿರಾರು ಪ್ರತಿಭಾವಂತ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿತ್ತು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮದ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿತ್ತು.

ಅಭ್ಯರ್ಥಿಗಳು ದೊಡ್ಡ ಮಟ್ಟದ ಅಭಿಯಾನವನ್ನೇ ನಡೆಸಿದ್ದರು. ಆರಂಭದಲ್ಲಿ ಅಕ್ರಮದ ಆರೋಪಗಳನ್ನು ಗಮನಿಸದಂತೆ ಇಂಟರ್ವ್ಯೂ ನಡೆಸಲು ಸಿದ್ಧತೆ ಮಾಡಿಕೊಂಡಿದ್ದ ಕೆಪಿಎಸ್‌ಸಿ, ಕೊನೆಗೂ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದಿದೆ. ಆಯೋಗದ ಕಾರ್ಯದರ್ಶಿ ಜ್ಯೋತಿ ಅವರು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸದ್ಯಕ್ಕೆ ಸಂದರ್ಶನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಇದು ಹಗಲಿರುಳು ಕಷ್ಟಪಟ್ಟು ಓದುತ್ತಿರುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ದೊಡ್ಡ ರಿಲೀಫ್ ನೀಡಿದೆ. ಕೇವಲ ಸಂದರ್ಶನ ರದ್ದಾಗುವುದು ಮಾತ್ರವಲ್ಲದೆ, ಈ ಹಗರಣದ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಅರ್ಹರಿಗೆ ಮಾತ್ರ ಉದ್ಯೋಗ ಸಿಗಬೇಕು ಎಂಬುದು ಇಡೀ ರಾಜ್ಯದ ಅಭ್ಯರ್ಥಿಗಳ ಆಗ್ರಹವಾಗಿದೆ.

Comments (0)

Your email address will not be published. Required fields are marked *

Back to top button