ಸಂಪಾದಕೀಯ..

ಸಿಎಂ ಸಿದ್ದು ವಾಡಿಕೆಯಂತೆ ಕೊಟ್ಟ ಬಜೆಟ್ ಪಾರ್ಟಿಯು ಸೋಶಿಯಲ್ ಮೀಡಿಯದಲ್ಲಿ ವಾಂತಿ ಭೇದಿಗೆ ಕಾರಣವಾಗಿದೆ. ಅದ್ಯಾರೋ ಪುಣ್ಯಾತ್ಮ ತನ್ನ ಹೊಟ್ಟೆಪಾಡಿಗಾಗಿ ಸಿಎಂ ಜತೆಗಿನ ಫೋಟೋ ಫೇಸ್ಬುಕ್ ಗೆ ಹಾಕಿದ್ದು, ಅದರಲ್ಲಿ ರಾಯಲ್ ಸಲ್ಯೂಟ್ -21 ಕಂಡಿದ್ದು ಕಾಳಗದ ಕೇಂದ್ರಬಿಂದು. ಸಿಎಂ ಅಕ್ಕಪಕ್ಕದಲ್ಲಿದ್ದವರ ಜಾತಿಯು ಸಂತ್ರಸ್ತರ ದಳ್ಳುರಿಗೆ ಎಳ್ಳು ಎರಚಿದೆ.
ಸಿದ್ದು ರಾಯಲ್ ಸಲ್ಯೂಟ್ ವಿವಾದದ ಬಗ್ಗೆ ನಮ್ಮ ವರದಿಗಾರನಿಗೆ ಕೇಳಲಾಗಿ ಅವರ ವರದಿ ಇಲ್ಲಿದೆ.
ಏಳು ಗಂಟೆಗೆ ಪಾರ್ಟಿ ಇತ್ತು. ಕೆಲವರಿಗೆ ಕರೆ ಮಾಡಿ ಆಹ್ವಾನ ಕೊಡಲಾಗಿತ್ತು. ಎಲ್ಲ ಕ್ಯಾಟ್ಗರಿಯ ಮುನ್ನೂರಕ್ಕೂ ಹೆಚ್ಚು ಪತ್ರಕರ್ತರಿರುವ ಸಿಎಂ ಗ್ರೂಪ್ ಗೆ ಇನ್ವಿಟೇಷನ್ ಹಾಕಲಾಗಿತ್ತು. ಹೀಗೆ ಏಳು ಗಂಟೆಗೆಲ್ಲ ಹಾಲ್ ತುಂಬಿತ್ತು. ವೃತ್ತಿನಿರತರು,ನಿವೃತ್ತರು, ಫ್ರೀಲ್ಯಾನ್ಸರ್ ಗಳು, ಯೂಟ್ಯೂಬರ್ ಗಳು, ಟ್ರೈನಿಗಳು ಗಿಜಿಗುಡುತ್ತಿದ್ದರು ಸೀಟಿಲ್ಲದೆ ಹಲವರು. ನಿಂತಿದ್ದರು. ಏಳಕ್ಕೆ ಬಂದವರು ಕಾದಿದ್ದೇ ಕಾದಿದ್ದು ಬಾಟೆಲ್ ಸೌಂಡ್ ಇಲ್ಲ. ಊಟನೂ ಕೊಡ್ತಿಲ್ಲ. ಅತ್ತ ಒಳಮಿಸಲು ಕ್ಯಾಬಿನೆಟ್ ನಲ್ಲಿ ಬ್ಯುಸಿಯಿದ್ದ ಸಿಎಂ ಬರ್ತಾ ಇಲ್ಲ ಇಲ್ಲಿ ಊಟ ಚಾಲೂ ಆಕ್ತಿಲ್ಲ. ಕಡೆಗೂ ಸಿಎಂ ಇಬ್ಬರು ಮಂತ್ರಿಗಳೊಟ್ಟಿಗೆ ಬಂದ್ರು. ಅತ್ತ ಊಟಕ್ಕೆ ಒಮ್ಮೆಗೆ ಎಲ್ಲರೂ ನುಗ್ಗಿದ್ರು.
ಇದು ಭಾಷಣದ ವೇದಿಕೆ ಅಲ್ಲ ಎಂದು ಗೊತ್ತಿಲ್ಲದ ಸಿಡಿಗಾಲು ಮಂತ್ರಿ ಒಬ್ಬರು ಸಿಎಂ ಸಲಹೆಗಾರರನ್ನು ಬಾರೊ ಇಲ್ಲಿ ಮೈಕ್ ಎಲ್ಲಿ..? ಅದೆಲ್ಲಿ ಇದೆಲ್ಲಿ ಅಂತಿದ್ರು,
ನಿವೃತ್ತರೊಬ್ಬರು ವೆಜ್ ಕೇಳಿದರೇ ಇಲ್ಲ ಇಲ್ಲ ಅಲ್ಲೇ ಹೋಗಿ ಹಾಕಿಸಿಕೊಂಡು ತಿನ್ನಿ ಎಂದು ಸಿಡಿಗಾಲು ಮಂತ್ರಿಯ ಉದ್ಧಟತನ ತೋರಿದ್ರು.
ಇತ್ತ ಟಪಾಂಗುಚ್ಚಿ ಸ್ಟೆಪ್ಸ್ ಗೆ ಹೆಸರಾದ ಮತ್ತೊಬ್ಬ ಮಂತ್ರಿ ನಂಗೂ ಇದಕ್ಕೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂತುಬಿಟ್ಟರು.
ಅತ್ತ ಸೂಕ್ತ ವ್ಯವಸ್ಥೆ ಇಲ್ಲದೆ ಅತ್ತ ಊಟದ ಪರದಾಟ..ಇತ್ತ ಸಿಎಂ ಸುತ್ತ ಸುತ್ತುವರಿಯಲು ಕೆಲ ಅಪ್ಲಿಕೇಶನ್ ವೀರರ ಹೋರಾಟ..ಇವೆರಡೂ ತಡೆಯಲು ಸಿಎಂ ಮೀಡಿಯಾ ಸಲಹೆಗಾರ ಮತ್ತು ವಾರ್ತಾ ಇಲಾಖೆ ಆಯುಕ್ತರೇ ಹೈರಾಣಾದರು.
ಇದೆ ವೇಳೆ ಟಿವಿಗಳ ಸಂಪಾದಕರ ಎಂಟ್ರಿ ಆಯಿತು. ಅವರಿಗೆ ಕೂರಲು ಕುರ್ಚಿಯಿಲ್ಲ. ಇತ್ತ ಮೊದಲೇ ಕೂತವರು ರಾಯಲ್ ಆಗಿ ಏರಿಸುತ್ತಿದ್ದರೇ, ಅತ್ತ ಕೆಲಸ ಮುಗಿಸಿ ತಡವಾಗಿ ಬಂದ ವೃತ್ತಿನಿರತರು ಕೆಲ ನಿಮಿಷ ಕೆಕಮಕ ನಿಲ್ಲಬೇಕಾಯಿತು. ಸಿಎಂ ಸುತ್ತಣ ವೃತ್ತಿ ವಿಶ್ರಾಂತರು ಆರಾಮಕ್ಕೆ ಕೂತು ಕುಡಿಯುತ್ತಿದ್ದರೆ ವೃತ್ತಿನಿರತರು ಸೀಟು ಇಲ್ಲದೆ ಬಂದ ತಪ್ಪಿಗೆ ಕೆಲಕಾಲ ಮುಜುಗರಕ್ಕೂ ಒಳಗಾಗಬೇಕಾಯಿತು. ಇದೆಲ್ಲ ಕಂಡ ನಮ್ಮ ಪ್ರತಿನಿಧಿ ಥರ್ಟಿ ಗೆ ಕಿಕ್ಕೇರಿಸಿಕೊಂಡು ಊಟಕ್ಕೆ ಮನೆಗೆ ಹೋದರಂತೆ.
ಇಂತಿಪ್ಪ ಸಿಎಂ ಪಾರ್ಟಿಗೆ ಹೋದವರನ್ನು ಜನ ಬೈತಿದ್ದಾರೆ. “ಉಡುರಾಜನೋಲಗದಿ ಕೂತು ಮೈಮರೆತಿರೇಕೆಂದು ಜಗ್ಗುತ್ತಿದ್ದಾರೆ. ಅವರೇಕೆ ಬರಬೇಕಿತ್ತು..? ಇವರನ್ನೇಕೆ ಕರೆಯಬೇಕಿತ್ತು..? ಎನ್ನುತ್ತಿದ್ದಾರೆ. ಮುನ್ನೂರು ಜನಕ್ಕೆ ಸರಿಯಾಗಿ ವ್ಯವಸ್ಥೆ ಮಾಡದೆ, ಊಟಕ್ಕೆ ಕಾಯಿಸಿ ಸಿಎಂ ಕಚೇರಿ ಸೋತಿತು. ಅಧಿಕಾರಶಾಹಿ ಜತೆ ಒಂದು ಪೆಗ್ಗು ಹಾಕಿದರೆ ಪತ್ರಕರ್ತ ತನ್ನ ವೃತ್ತಿ ಮರೆಯುತ್ತಾನೆ ಎನ್ನುವ ಕಗ್ಗ ಹೊಸೆದು ಟೀಕಾಕಾರರು ಸೋಲುತ್ತಿದ್ದಾರೆ.