Editorial

ಸಂಪಾದಕೀಯ…

ಪ್ರೀತಿಯ ಓದುಗರೇ.. ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಇಲ್ವಾ ಅನ್ನೋ ಪ್ರಶ್ನೆ ಎಲ್ಲರಲ್ಲಿದೆ.‌ ಇದೇ ವೇಳೆ ಡಿಕೆಯನ್ನು ರಾಜಕೀಯದ ಪುಷ್ಪ, ಎಷ್ಟು ಬೇಕೋ ಕೊಡ್ತೀನಿ ಸಿಎಂ ಮಾಡಿ ಎಂದು ರಾಹುಲ್‌ ಬಳಿ ಕೇಳುವಂತೆ ಎಐ ಫೋಟೋವನ್ನು ಜೆಡಿಎಸ್‌ ತನ್ನ ಪೇಜ್‌ ಗಳಲ್ಲಿ ಹಾಕಿ ವ್ಯಂಗ್ಯಮಾಡಿದೆ. ಇತ್ತ ಸಿದ್ದರಾಮಯ್ಯ ದೇಶದ ಅತ್ಯಂತ ಸ್ಟ್ರಾಂಗ್ ಲೀಡರ್‌ ಎಂದು ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್ ಹೇಳಿರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ. ಇದು ಡಿಕೆ ಮತ್ತು ಬೆಂಬಲಿಗರಲ್ಲಿ ಇವೆಲ್ಲ ದುಗುಡಕ್ಕೆ ಕಾರಣವಾಗಿವೆ.

ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿಗಳು, ಬೆಂಗಳೂರು ನಗರಾಭಿವೃದ್ಧಿ ಮಂತ್ರಿಗಳು, ಜಲ ಸಂಪನ್ಮೂಲ , ಅಷ್ಟೇ ಅಲ್ಲ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಇಂಥ ಭಾರೀ ಹುದ್ದೆಗಳ ಮೇಲೆ ಕೂತ ಇವರಿಗೆ ಸದ್ಯಕ್ಕೆ ಕುಬೇರಯೋಗ ನಡೆಯುತ್ತಿದೆ.

ಕಲಾಸಿಪಾಳ್ಯದ ಮಜೂರ್ ಗಳಿಂದ ಹಿಡಿದು ರಾಜಧಾನಿಯ ಹುಜೂರ್ ಗಳ ವರೆಗೆ.. ಪಂಚಾಯ್ತಿಯ ಪಡಸಾಲೆಯ ಜಾಡಮಾಲಿ ಯಿಂದ ವಿಧಾನಸೌಧದ ಮೊಗಸಾಲೆಯ ಕಾರ್ಯದರ್ಶಿವರೆಗೆ ಎಲ್ಲರ ಆಟವೂ ಈ ಸ್ಟ್ರೀಟ್‌ಫೈಟರ್‌ ಗೆ ಗೊತ್ತು. ಈ ಇಲಾಖೆಗಳಲ್ಲಿ ಇವರ ಗಮನಕ್ಕೆ ಬಾರದೆ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಪ್ಯೂನ್ ನಿಂದ ಹಿಡಿದು ಕಾರ್ಯದರ್ಶಿ ವರೆಗೆ ಕೆಮ್ಮಿದರೂ ಇವರಿಗೆ ವರದಿ ಬರುತ್ತದೆ. ಯಾವ ಕಾರಕೂನ ಎಲ್ಲಿಗೆ ಹೋಗಿ ಬಂದ.. ಅವನ್ಯಾರು, ಅವನ ನೆಂಟರು ಯಾರು..? ಅವರ ಸೇವಕರು ಯಾರು? ಎಂಬುದೆಲ್ಲ ಬಂಡೆಣ್ಣಗೆ ಕರತಲಾಮಲಕ. ಹಾಗಾಗಿ ಇವರ ಎದುರು ಯಾರೂ ಬಾಲ ಬಿಚ್ಚಲ್ಲ. ಕಮಕ್‌ ಕಿಮಕ್‌ ಅನ್ನಲ್ಲ. ಒಣ ಭಾಷಣ ಮಾಡಿದರೆ ಕೇಳಲ್ಲ… ಮಡಗೋ ಲೇ ಗೊತ್ತಿದೆ ಎನ್ನೊ ನೇರವಂತಿಕೆ.

ಇಂತಿಪ್ಪ ಒಬ್ಬ ರಾಜಕಾರಣಿಗೆ ದೇವರು ಎಷ್ಟು ಕೊಡಬಹುದೋ, ಅದಕ್ಕೂ ಹೆಚ್ಚು ಡಿಕೆಗೆ ಕೊಟ್ಟಿದ್ದಾನೆ. ಆದರೆ ಕನಕಪುರದ ದೊಡ್ಡ ಕನಸುಗಾರನಿಗೆ ಕುಬೇರಯೋಗ ಸುಖ ಕೊಡ್ತಿಲ್ಲ. ಅವರಿಗೆ ರಾಜಯೋಗ ಬೇಕು. ಅದು ಸಿಎಂ ಕುರ್ಚಿಯ ಮೇಲೆ ಕೂರುವ ರಾಜಯೋಗದ ಕನಸು.

ಬೀದಿಯಲ್ಲಿ ಬೆಳೆದ ಹುಡುಗನೊಬ್ಬ ತಮ್ಮ ಎದುರು ನಿಲ್ಲುವುದು ಹಲವು ಕಾಂಗ್ರೆಸ್‌ ಹಿರಿತಲೆಗಳಿಗೆ ಇಷ್ಟವಿಲ್ಲ. ಇದಕ್ಕೆ ಅವರು ಆ ಕಾಲದಿಂದಲೂ ಡಿಕೆಗೆ ಸಿಡಿ ಶಿವು, ಕೊತ್ವಾಲ್ ಶಿಷ್ಯ, ಗ್ರಾನೈಟ್ ಗಿರಾಕಿ, ಕನಕಪುರ ಡಿಕ್ಟೇಟರ್, ಧಮ್ಕಿ ಶಿವ, ಹೈಜಾಕ್ ಕುಮಾರ್, ಡೆಡ್ಲಿ ಡೀಲರ್, ಪೊಲಿಟಿಕಲ್ ಬ್ಯುಸಿನೆಸ್ಮನ್ ಇತ್ಯಾದಿ ಹೆಸರಿಡುತ್ತಿದ್ದಾರೆ. ಈ ನೆಗೆಟಿವ್ ಹೆಸರುಗಳನ್ನು ತನ್ನ ಕೆರಿಯರ್‌ ನ ಬಯೋಡೇಟಾದಿಂದ ಅಳಿಸುವ ಹಠ ಡಿಕೆಯದ್ದು.

ಬದಲಿಗೆ, ಮೇಲಿನ ನೆಗೆಟಿವ್‌ ಶೇಡ್‌ ಬದಲು ಕಾಂಗ್ರೆಸ್ ಟ್ರಬಲ್ ಶೂಟರ್, ಸೋನಿಯಾ ಭಕ್ತ, ದಳಪತಿಗಳ ಧಗಡ್, ಡೂ ಆರ್ ಡೈ ಡಿಕೆ, ಜೈಂಟ್ ಕಿಲ್ಲರ್ ಇತ್ಯಾದಿ ವಿಶೇಷಣಗಳ ಜತೆ ಪಿಆರ್‌ ಗಿರಿ ಮಾಡಿಸಿಕೊಳ್ಳುತ್ತಾ ದುಡಿತಿದ್ದಾರೆ. ರಾಜನ ಪದವಿ ಸಿಗಲು ಇತಿಹಾಸ ಎಷ್ಟು ಮುಖ್ಯ ಅಲ್ಲವಾ..?

Comments (0)

Your email address will not be published. Required fields are marked *

Back to top button