ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯೆಯಲ್ಲಿ ಇರುವ ಹಿಂದೂಗಳ ಸ್ಥಿತಿ ಇತ್ತೀಚಿನ ಹಲವು ತಿಂಗಳುಗಳಿಂದ ಬಹಳ ಹದಗೆಟ್ಟಿದೆ. ಹಿಂದೂಗಳು ಜೀವಭಯದಿಂದ ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿವೆ. ಹಿಂದೂಗಳು ಹಬ್ಬ ಆಚರಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ.
ಪ್ರತಿವರ್ಷ ಸಂಭ್ರಮದಿಂದ ಆಚರಿಸುವ ದುರ್ಗಾ ಪೂಜೆಗೂ ಈಗ ಬಾಂಗ್ಲಾದಲ್ಲಿ ನೂರೆಂಟು ವಿಘ್ನಗಳು ಎದುರಾಗಿವೆ. ಭದ್ರತಾ ಸಮಸ್ಯೆ, ಶಾಂತಿ ಸುವ್ಯವಸ್ಥೆ ಹದಗೆಡುವ ನೆಪವೊಡ್ಡಿ, ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ದುರ್ಗಾ ಪೂಜೆಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರ ಅನುಮತಿ ನಿರಾಕರಿಸಿದೆ. ಹಿಂದೂಗಳು ಈ ಬಾರಿ ದುರ್ಗಾ ಪೂಜೆ ಆಚರಿಸಬೇಕೆಂದಿದ್ದರೆ 5 ಲಕ್ಷ ರು. ಜಿಜಿಯಾ ತೆರಿಗೆ ಭರಿಸುವಂತೆ ಬಾಂಗ್ಲಾದೇಶ ಸರಕಾರ ತಾಕೀತು ಮಾಡಿದೆ.
ಜತೆಗೆ ದೇಶದಲ್ಲಿನ ಮುಸ್ಲಿಂ ಮುಖಂಡರಂತೂ ಹಿಂದೂಗಳ ಮೇಲೆ ತರಹೇವಾರಿ ನಿರ್ಬಂಧಗಳನ್ನು ಹೇರುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯ ಎನಿಸಿಕೊಂಡಿರುವ ಹಿಂದೂ, ಬೌದ್ಧ, ಸಿಖ್ ಧರ್ಮೀಯರು ತಮ್ಮ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಬೇಕು ಎಂದರೆ ದೇಶದ ಸರಕಾರ ಮತ್ತು ಸ್ಥಳೀಯ ಮುಸ್ಲಿಂ ಮುಖಂಡರ ಅನುಮತಿ ಪಡೆಯಲೇಬೇಕು ಎನ್ನುವ ಬಲು ಇಕ್ಕಟ್ಟಿನ ಪರಿಸ್ಥಿತಿ ಇದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪ ಸಂಖ್ಯಾತ ಸಮುದಾಯಗಳ ಜನರ ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಕಳೆದುಕೊಂಡು ಪರಿತಪಿಸುತ್ತಿದ್ದರು ವಿಶ್ವಸಂಸ್ಥೆ ಜಾಣಮೌನ ವಹಿಸಿದೆ.
ದುರ್ಗಾಪೂಜೆ ಆಯೋಜಕರಿಗೆ ಬೆದರಿಕೆ ಪತ್ರ
ಬಾಂಗ್ಲಾದೇಶದ ಹಲವಾರು ಕಡೆಗಳಲ್ಲಿ ದುರ್ಗಾ ಪೂಜಾ ಸಮಿತಿಗೆ ಬೆದರಿಕೆ ಪತ್ರಗಳು ಬಂದಿವೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ವೇಳೆ ದುರ್ಗಾ ಪೂಜೆ ಆಚರಿಸಬೇಕೆಂದಿದ್ದರೆ. ಐದು ಲಕ್ಷ ರು. ಪಾವತಿಸುವಂತೆ ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ. ಖುಲ್ನಾ ಪ್ರದೇಶದ ಡಾಕೋಪ್ನಲ್ಲಿರುವ ಹಲವಾರು ದೇವಸ್ಥಾನಗಳು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಿಸಿವೆ.
ಕಾಶ್ಮೀರದ ನೆನಪು
ಭಾರತದಲ್ಲಿ ಕೂಡಾ 1990ರಂದು ಹಿಂದೂಗಳಿಗೆ ಇಂತಹದೇ ಪರಿಸ್ಥಿತಿ ಎದುರಾಗಿತ್ತು. ಕಾಶ್ಮೀರದಲ್ಲಿನ ಅಲ್ಪಸಂಖ್ಯಾತ ಹಿಂದೂಗಳು, ಅದೂ ಮುಖ್ಯವಾಗಿ ಕಾಶ್ಮೀರಿ ಪಂಡಿತರು ಇದೇ ಬಗೆಯಲ್ಲಿ ಕಾಶ್ಮೀರದಲ್ಲಿನ ಬಹುಸಂಖ್ಯಾತ ಸಮುದಾಯದ ಜನರಿಂದ ಹಿಂಸೆಗೆ ಗುರಿಯಾದರು. ಪರಿಣಾಮ 5 ಲಕ್ಷ ಕಾಶ್ಮೀರಿ ಪಂಡಿತರು ಮಕ್ಕಳು, ಮಹಿಳೆಯರ ಜೀವನ, ಮಾನ ಉಳಿಸಿಕೊಳ್ಳಲು ಊರು, ಮನೆ ತೊರೆದು ಜಮ್ಮು ಭಾಗಕ್ಕೆ ವಲಸೆ ಹೋದರು. ಕೆಲವು ದಿನಗಳ ನಂತರ ಅಲ್ಲಿಂದಲು ಸ್ಥಳಾಂತರಗೊಳ್ಳ ಬೇಕಾಯಿತು. ಈಗ ಬಾಂಗ್ಲಾದೇಶದ ಹಿಂದೂಗಳಿಗೂ ಅಂತಹದೇ ಪರಿಸ್ಥಿತಿ ಎದುರಾಗಿದೆ.