ಕಲ್ಬುರ್ಗಿ : ಕಲ್ಬುರ್ಗಿಯ ನಾಲ್ವರು ಯುವಕರು ಸೇರಿದಂತೆ ಭಾರತದ ಆರು ಮಂದಿ ಯುವಕರು ಸೆಕ್ಯೂರಿಟಿ ಕೆಲಸಕ್ಕೆಂದು ರಷ್ಯಾಗೆ ತೆರಳಿದ್ದಾರೆ. ಆದ್ರೆ ಅಲ್ಲಿ ಸೆಕ್ಯೂರಿಟಿ ಕೆಲಸದ ಬದಲಿಗೆ ಟ್ರೈನಿಂಗ್ ನೆಪದಲ್ಲಿ ಉಕ್ರೇನ್ ವಿರುದ್ಧದ ಯುದ್ದಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ವಿಚಾರ ಇದೀಗ ದೇಶವ್ಯಾಪಿ ಚರ್ಚೆಯಾಗುತ್ತಿದೆ. ಯುರೋಪ್ನ ಅತಿದೊಡ್ಡ ದೇಶಗಳಲ್ಲಿ ಒಂದಾಗಿರುವ ಉಕ್ರೇನ್ ಬಾರ್ಡರ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕಾಗಿ ಹೋಗಿದ್ದ ಕಲಬುರಗಿಯ ಯುವಕರು ಸಿಕ್ಕಿ ಹಾಕಿಕೊಂಡಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಹೋಗಿದ್ದವರು ಉಕ್ರೇನ್ ಬಾರ್ಡರ್ನಲ್ಲಿ ಯುದ್ದಕ್ಕೆ ನಿಯೋಜನೆಗೊಂಡಿದ್ದಾರೆ. ತರಬೇತಿ ನಡೆದಿದೆ ಅಂತಾ ಹೇಳಿ ನಮ್ಮನ್ನ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ ಎಂದು ಸಿಲುಕಿಕೊಂಡ ಯುವಕನೋರ್ವ ವಿಡಿಯೋ ಮಾಡಿದ್ದಾನೆ. ಇತ್ತ ಅವರ ಕುಟುಂಬ ನಮ್ಮ ಮಕ್ಕಳನ್ನ ಕಾಪಾಡಿ ಅಂತ ಪೋಷಕರು ತೋಡಿಕೊಳ್ಳುತ್ತಿದ್ದಾರೆ. ಉದ್ಯೋಗಕ್ಕಾಗಿ ತೆರಳಿದ್ದ ಯುವಕರನ್ನು ರಷ್ಯಾ ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ ಎಂದು ಇತ್ತೀಚೆಗೆ ಹೈದರಾಬಾದ್ನಲ್ಲಿ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಹೇಳಿಕೆ ನೀಡಿದ್ದರು.
ಕೆಲಸಕ್ಕಾಗಿ ಕಲಬುರಗಿಯ 4 ಯುವಕರು ಸೇರಿ ಭಾರತದ 6 ಯುವಕರು ಬಾಬಾ ಏಜೆಂಟ್ ಮೂಲಕ 2023 ಡಿಸೆಂಬರ್ 5 ರಂದು ರಷ್ಯಾಕ್ಕೆ ತೆರಳಿದ್ದರು. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಕ ಪ್ರತಿಯೊಬ್ಬ ಯುವಕರ ಬಳಿ ಮೂರು ಲಕ್ಷ ಹಣ ಪಡೆದುಕೊಂಡಿದ್ದ. ಆದರೆ ಈಗ ಕೆಲಸ ಸಿಗುವ ಆಸೆಯಲ್ಲಿ ಉಕ್ರೇನ್ಗೆ ಹೋದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಳಬುರಗಿಯ ಆಳಂದ ತಾಲೂಕಿನ ನರೋಣದ ಸೈಯದ್ ಇಲಿಯಾಸ್ ಹುಸೇನ್, ಮೊಹಮ್ಮದ್ ಸಮೀರ್ ಅಹಮದ್, ಸೋಫಿಯಾ ಮೊಹಮ್ಮದ್ ರಷ್ಯಾದಲ್ಲಿ ಸಿಲುಕಿಕೊಂಡಿದ್ದಾರೆ.
ಉಕ್ರೇನ್ ನಲ್ಲಿರೋ ಹುಡುಗನ ತಂದೆ ನವಾಜ್ ಕಾಳಗಿ, ನನ್ನ ಮಗನಿಗೆ ಏಜೆಂಟ್ಗಳು ಮೋಸ ಮಾಡಿದ್ದಾರೆ. ಅವನು ಸಮಸ್ಯೆಯಲ್ಲಿದ್ದಾನೆ. ನನ್ನ ಮಕ್ಕಳಿಗೆ ಮೋಸ ಆಗಿದೆ ಭಾರತದ ಅನೇಕ ಜನರಿಗೆ ಮೋಸ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಉಕ್ರೇನ್ ಬಾರ್ಡರ್ನಲ್ಲಿ ಯುದ್ದದಲ್ಲಿ ನಿಯೋಜನೆ ಮಾಡಿದ್ದಾರೆ. ಮತ್ತೊಬ್ಬ ಯುವಕನನ್ನ ಎಲ್ಲಿ ಹಾಕಿದ್ದಾರೆ ಅಂತಾ ಇದುವರೆಗೂ ಗೊತ್ತಾಗಿಲ್ಲ ಎಂದು ಯುವಕನ ತಂದೆ ಅಳಲು ತೋಡಿಕೊಂಡಿದ್ದಾರೆ. ಆದಷ್ಟು ಬೇಗ ಸರ್ಕಾರ ಮಧ್ಯೆ ಪ್ರವೇಶಿಸಿ ಯುವಕರನ್ನು ತವರಿಗೆ ಕರೆತರಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ಈ ಪ್ರಕರಣ ವಿದೇಶದಲ್ಲಿ ಹೆಚ್ಚಿನ ಸಂಬಳ ಸಿಗುತ್ತೆ ಅಂತ ದುಡಿಯೋಕೆ ಹೋಗೋ ಪ್ರತಿಯೊಬ್ಬ ಯುವಕ ಯುವತಿಯರಿಗೆ ಸೂಕ್ತ ಉದಾಹರಣೆ. ಇಲ್ಲಿ ಕೈ ತುಂಬಾ ಸಂಬಳ ಕೊಡ್ತೀವಿ ಅನ್ನೋ ಆಮಿಷವೊಡ್ಡಿ ಅಲ್ಲಿ ನಿಮ್ಮನ್ನ ಹೇಗೆ ಬಳಸಿಕೊಳ್ತಾರೋ ಗೊತ್ತಾಗೋದಿಲ್ಲ..ಹೀಗಾಗಿ ಯುವಕ ಯುವತಿಯರೇ ವಿದೇಶಕ್ಕೆ ಏಜೆಂಟ್ ಗಳನ್ನ ನಂಬಿ ಹೋದ್ರೆ ಸಂಕಷ್ಟ ಗ್ಯಾರಂಟಿ.