ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ, 11 ಮಂದಿ ಬಲಿಯಾಗಿದ್ದರು. ಇದೀಗ ಮೃತ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರದ ಚೆಕ್ ವಿತರಿಸಲಾಗುತ್ತಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು, ಶಾಸಕರು ಸ್ವತಃ ತಾವೇ ಹೋಗಿ ಪರಿಹಾರದ ಚೆಕ್ ನೀಡಿ, ಸಾಂತ್ವನ ಹೇಳಿ ಬರುತ್ತಿದ್ದಾರೆ.
ಮೈಸೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ ಪೂರ್ಣಚಂದ್ರ, ವಿಜಯೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ನೂಕು ನೂಗ್ಗಲು ಹೆಚ್ಚಾಗಿ ಉಸಿರುಕಟ್ಟಿ ಪೂರ್ಣಚಂದ್ರ ಕೂಡ ಮೃತಪಟ್ಟಿದ್ರು. ಹುಟ್ಟೂರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರದಲ್ಲಿ ಸ್ಮಶಾಸನ ಮೌನ ಆವರಿಸಿದೆ. ಮೃತ ಪೂರ್ಣಚಂದ್ರ ಮನೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕೆ.ಆರ್.ಪೇಟೆ ಶಾಸಕ ಹೆಚ್.ಟಿ ಮಂಜು, ಜಿಲ್ಲಾಧಿಕಾರಿ ಡಾ. ಕುಮಾರ್ ಜೊತೆ ಭೇಟಿ ನೀಡಿದ್ರು. ಮೃತ ಪೂರ್ಣಚಂದ್ರ ಪೋಷಕರಿಗೆ ಸಾಂತ್ವನ ಹೇಳಿ, ತಾಯಿಗೆ 25 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು.
ತುಮಕೂರು ಮೂಲದ ಮೃತ ಮನೋಜ್ ಕುಟುಂಬಕ್ಕೂ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ. ಸಿಎಂ ನಿರ್ದೇಶನದ ಮೇರೆಗೆ ಮೃತ ಮನೋಜ್ ತಂದೆ ದೇವರಾಜ್ ಅವರಿಗೆ ಪರಿಹಾರದ ಚೆಕ್ ನೀಡಿದರು. ಈ ವೇಳೆ ಮಗನನ್ನ ನೆನೆದು ಭಾವುಕರಾದ ದೇವರಾಜ್, ನನಗೆ ಇದ್ದದ್ದು ಒಬ್ಬನೇ ಮಗ. ಚೆಕ್ ಕೊಟ್ಟರೆ ಮಗಾ ಬರ್ತಾನಾ? ವಿದೇಶಕ್ಕೆ ಹೋಗುವ ಕನಸು ಇತ್ತು. ಒಂದು ಜೀವದ ಬೆಲೆ ದುಡ್ಡಲ್ಲ, ಮನುಷ್ಯತ್ವ ಇರಬೇಕು. ರಾಜ್ಯ ಸರ್ಕಾರ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕಿತ್ತು. ನೋವಿಗೆ ಹಣ ಪರಿಹಾರವಲ್ಲ. ಈ ಹಣವನ್ನು ನಾನು ಉಪಯೋಗಿಸಲ್ಲ. ನನ್ನ ಮಗಳ ಮುಂದಿನ ಭವಿಷ್ಯಕ್ಕೆ ಬಳಸುತ್ತೇನೆ ಅಂತಾ ಕಣ್ಣೀರಾಕಿದ್ರು.