ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸರ್ವೆ ನಡೆಸಲಾಗುತ್ತಿದೆ. ಆದರೆ ಬೆಂಗಳೂರಿನ ಕೆಲ ಕಡೆ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಸರ್ವೇ ನಡೆಸದೇ, ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿಕೊಂಡು ಬರುತ್ತಿರುವುದಾಗಿ ದೂರುಗಳು ಕೇಳಿಬಂದಿವೆ.
ಮನೆಯಲ್ಲಿ ಜನರು ಇದ್ದರೂ ಯಾವುದೇ ಮಾಹಿತಿ ಪಡೆಯದೇ ಅಧಿಕಾರಿಗಳು ಕೇವಲ ಸ್ಟಿಕ್ಕರ್ ಅಂಟಿಸಿ ತೆರಳುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಒಂದೂವರೆ ತಿಂಗಳಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಕುಟುಂಬದ ಸರ್ವೇ ನಡೆಸಲಾಗ್ತಿದೆ. ಈಗಾಗಲೇ ಶೇ 90 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
ಬೆಂಗಳೂರು ನಗರದಲ್ಲಿ ಶೇ 50 ರಷ್ಟು ಸಮೀಕ್ಷೆ ಪೂರ್ಣಗೊಂಡಿಲ್ಲ. ಸಮೀಕ್ಷೆ ಪೂರ್ಣವಾಗದ ಕಾರಣ ಮನೆಗಳನ್ನ ಖಾತರಿಪಡಿಸಿಕೊಳ್ಳುವುದಕ್ಕೆ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್ ಸ್ಟಿಕ್ಕರ್ ಅಂಟಿಸುವದಕ್ಕೆ ಸೂಚನೆ ನೀಡಿದ್ದಾರೆ. ಜೂನ್ 23 ರಿಂದ ಸ್ಟಿಕ್ಕರ್ ಅಂಟಿಸುವ ಕಾರ್ಯ ಆರಂಭವಾಗಿದೆ.
ಆದ್ರೆ ಸಮೀಕ್ಷೆ ಮಾಡದೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸುತ್ತಿರುವ ಆರೋಪ ಕೇಳಿಬಂದಿದೆ. ಬನಶಂಕರಿ, ಕುಮಾರಸ್ವಾಮಿ ಲೇಔಟ್, ವಿಠಲ್ ನಗರ, ಪದ್ಮನಾಭನಗರ ಸೇರಿ ಇನ್ನಿತರ ಕಡೆ ಸಮೀಕ್ಷೆ ಮಾಡದೆ ಸ್ಟಿಕ್ಕರ್ ಅಂಟಿಸುತ್ತಿರುವ ಆರೋಪ ಕೇಳಿಬಂದಿದೆ.