ನವದೆಹಲಿ : ದಿಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸೀಲಾಂಪುರದಲ್ಲಿ ಬಹಿರಂಗ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ತಮ್ಮ ಸಾರ್ವಜನಿಕ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಸೀಲಾಂಪುರದಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೆಹಲಿಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ರಣಕಹಳೆ ಊದಿದರು. ಕೇಜ್ರಿವಾಲ್ ಮತ್ತು ಮೋದಿಯವರು ಚುನಾವಣೆಯ ಸಮಯದಲ್ಲಿ ಭರಪೂರ ಭರವಸೆ ನೀಡುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಚುನಾವಣೆ ನಂತರ ಕಣ್ಮರೆಯಾಗುತ್ತಾರೆ. ಕಾಂಗ್ರೆಸ್ ಸತತವಾಗಿ ಅಗತ್ಯವಿರುವ ಸಮಯದಲ್ಲಿ ಜನರ ಪರವಾಗಿ ನಿಂತಿದೆ ಎಂದು ಪ್ರತಿಪಾದಿಸಿದರು.
ಜಾತಿ ಆಧಾರಿತ ಜನಗಣತಿ, ಮೀಸಲಾತಿ ಮಿತಿ ಹೆಚ್ಚಳ ಅದಾನಿಯನ್ನು ಒಳಗೊಂಡ ಕ್ರೋನಿ ಕ್ಯಾಪಿಟಲಿಸಂ ಆರೋಪಗಳಂತಹ ರಾಷ್ಟ್ರೀಯ ವಿಷಯಗಳನ್ನು ಮರುಪರಿಶೀಲಿಸುವುದರೊಂದಿಗೆ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಸಂಪತ್ತಿನ ಅಂತರವನ್ನು ಪರಿಹರಿಸುವಲ್ಲಿ ಮೋದಿ ಮತ್ತು ಕೇಜ್ರಿವಾಲ್ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.