ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಸಂಚರಿಸುತ್ತಿದ್ದ ಕಾರಿಗೆ, ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವಿಗೀಡಾಗಿರುವ ಘಟನೆ, ಇಂದು ಮಧ್ಯಾಹ್ನ ಮಂಡ್ಯ ತಾಲ್ಲೂಕಿನ ತೂಬಿನಕರೆ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಾಣಬಿಟ್ಟಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ನಿವೃತ್ತ ಎಇ ಸತ್ಯಾನಂದ ರಾಜೇ ಅರಸ್ (51), ಪತ್ನಿ ನಿಶ್ಚಿತಾ(45), ಸುಮೇಧಿನಿ ರಾಣಿ (50) ಹಾಗೂ ಚಂದ್ರು (65) ಎಂಬುವವರು ಸಾವಿಗೀಡಾಗಿದ್ದಾರೆ.
ನಿವೃತ್ತ ಜೆಇ ಸತ್ಯಾನಂದರಾಜೇ ಅರಸ್ ಅವರ ಸೋದರ ಮಾವ ಸಾವನ್ನಪ್ಪಿದ್ದರು. ಕುಟುಂಬ ಸಮೇತ ಮಾವನ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಸತ್ಯಾನಂದರಾಜೇ ಅರಸ್ ಕುಟುಂಬ ಕಾರಿನಲ್ಲಿ ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತೆರಳಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.