ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಗೌರವಾರ್ಥ ಭಾರತ ಸರ್ಕಾರ ಗುರುವಾರ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಎರಡು ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ದೆಹಲಿಯ ಏಮ್ಸ್ನಲ್ಲಿ ಕೊನೆಯುಸಿರೆಳೆದರು. ಮಾಜಿ ಪ್ರಧಾನಿ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕರ್ನಾಟಕದಲ್ಲಿ ಇಂದು ಸರ್ಕಾರಿ ರಜೆ
ಇದೇ ವೇಳೆ ಮನಮೋಹನ್ ಸಿಂಗ್ ಅವರ ನಿಧನದ ನಂತರ ಕರ್ನಾಟಕದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಡಿಸೆಂಬರ್ 27 ರಂದು ಸರ್ಕಾರಿ ರಜೆ ಘೋಷಿಸಲಾಗಿದೆ. ಇತ್ತ ತೆಲಂಗಾಣ ಸರ್ಕಾರವು ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶುಕ್ರವಾರ ರಜೆ ಘೋಷಿಸಿದೆ. ರಾಜ್ಯ ಸರ್ಕಾರ ಏಳು ದಿನಗಳ ಶೋಕಾಚರಣೆ ಘೋಷಿಸಿದೆ. ದೆಹಲಿ ಮುಖ್ಯಮಂತ್ರಿ ಅತಿಶಿ ಕೂಡ ತಮ್ಮ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಗಾಗಿ ದೀಪಗಳಿಂದ ಅಲಂಕರಿಸಲ್ಪಟ್ಟ ಕರ್ನಾಟಕದ ಬೆಳಗಾವಿ, ಮಾಜಿ ಪ್ರಧಾನಿ ನಿಧನದ ನಂತರ ಶೀಘ್ರದಲ್ಲೇ ಕತ್ತಲೆಯಲ್ಲಿ ಮುಳುಗಿತು. ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ 1924ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಆಚರಣೆಯ ಭಾಗವಾಗಿ ಡಿಸೆಂಬರ್ 27 ರಂದು ಕಾಂಗ್ರೆಸ್ ಸಾರ್ವಜನಿಕ ಸಭೆಯನ್ನು ಯೋಜಿಸಲಾಗಿತ್ತು.
ಮನೆಯಲ್ಲಿ ಹಠಾತ್ ಪ್ರಜ್ಞೆ ತಪ್ಪಿಸ ಮಾಜಿ ಪಿಎಂ
2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಅವರು 26 ಡಿಸೆಂಬರ್ 2024 ರಂದು ಮನೆಯಲ್ಲಿ ಹಠಾತ್ ಪ್ರಜ್ಞೆ ಕಳೆದುಕೊಂಡರ ನಂತರ ಆಸ್ಪತ್ರೆಗೆ ಸೇರಿಸಲಾಯಿತು ಎಂದು ದೆಹಲಿಯ ಏಮ್ಸ್ ತಿಳಿಸಿದೆ. ಮನಮೋಹನ್ ಸಿಂಗ್, ಭಾರತದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. 1991ರಲ್ಲಿ ಭಾರತದ ಆರ್ಥಿಕತೆಯನ್ನು ತೆರೆದುಕೊಂಡ ಕೀರ್ತಿಗೆ ಪಾತ್ರರಾಗಿದ್ದಾರೆ. ಉದಾರೀಕರಣವನ್ನು ಬೆಂಬಲಿಸುವ ಮೂಲಕ ಮತ್ತು ಕೇಂದ್ರೀಕೃತ ಉಪಕ್ರಮಗಳ ಮೂಲಕ ನಿರ್ಣಾಯಕ ಸಾಮಾಜಿಕ ಸವಾಲುಗಳನ್ನು ನಿಭಾಯಿಸುವ ಮೂಲಕ ಭಾರತದ ಆರ್ಥಿಕ ಚೌಕಟ್ಟನ್ನು ಪರಿವರ್ತಿಸುವಲ್ಲಿ ಸಿಂಗ್ ಅವರ ನೀತಿಗಳು ಪ್ರಮುಖ ಪಾತ್ರವಹಿಸಿದವು.
ಆರ್ಥಿಕ ಸುಧಾರಣೆಗೆ ನಾಂದಿ
1991ರಲ್ಲಿ ಸಿಂಗ್ ಅವರು ಹಣಕಾಸು ಸಚಿವಾಲಯದ ಅಧಿಕಾರವನ್ನು ವಹಿಸಿಕೊಂಡಾಗ, ಭಾರತದ ವಿತ್ತೀಯ ಕೊರತೆಯು GDP ಯ 8.5 ಪ್ರತಿಶತದ ಸಮೀಪದಲ್ಲಿತ್ತು, ಪಾವತಿಗಳ ಸಮತೋಲನದ ಕೊರತೆಯು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು GDP ಯ 3.5 ಪ್ರತಿಶತದ ಸಮೀಪದಲ್ಲಿತ್ತು. ವಿಷಯಗಳನ್ನು ಇನ್ನಷ್ಟು ಹದಗೆಡಿಸಲು, ವಿದೇಶಿ ಮೀಸಲು ಎರಡು ವಾರಗಳ ಆಮದುಗಳಿಗೆ ಪಾವತಿಸಲು ಸಾಕಾಗಿತ್ತು, ಇದು ಭಾರತೀಯ ಆರ್ಥಿಕತೆಯು ಆಳವಾದ ಬಿಕ್ಕಟ್ಟಿನಲ್ಲಿದೆ ಎಂದು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಸಿಂಗ್ ಅವರು ಮಂಡಿಸಿದ ಕೇಂದ್ರ ಬಜೆಟ್ 1991-92 ಮೂಲಕ ಹೊಸ ಆರ್ಥಿಕ ಯುಗವನ್ನು ತರಲಾಯಿತು.


