ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಫಘಾತಕ್ಕೀಡಾಗಿ ಯುವ ಪತ್ರಕರ್ತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಬಳಿ ನಡೆದಿದೆ.
ಪತ್ರಕರ್ತ ಮೂಲತಃ ಗುಡಿಬಂಡೆ ನಿವಾಸಿ ಭರತ್ (32) ಮೃತ ದುರ್ದೈವಿ. ಬೆಂಗಳೂರಿನಲ್ಲಿ ಖಾಸಗಿ ಪತ್ರಿಕೆಯಲ್ಲಿ ವಿಶೇಷ ವರದಿಗಾರನಾಗಿ ಭರತ್ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲೇ ವಾಸವಿದ್ದ ಭರತ್, ವಾರಾಂತ್ಯದ ಹಿನ್ನೆಲೆ ಸ್ವಗ್ರಾಮ ಗುಡಿಬಂಡೆಗೆ ಆಗಮಿಸಿದ್ದ. ತಡರಾತ್ರಿ ಬಾಗೇಪಲ್ಲಿಗೆ ತೆರಳುವಾಗ ಈ ಅಫಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಚಹಳ್ಳಿ ಕೆರೆಯ ಏರಿಯ ಮೇಲೆ ಇದ್ದ ದೇವರ ಕಲ್ಲಿನ ಗುಡಿಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ದೇವರ ಗುಡಿಯ ಮೇಲಿನ ಚಪ್ಪಡಿ ಕಲ್ಲು ಕಾರಿನೊಳಗೆ ತೂರಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಭರತ್ ಸಾವನ್ನಪ್ಪಿದ್ದಾನೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.