ಆಂಧ್ರಪ್ರದೇಶ:ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಮನದಿಂದ ಅವರ ಬೆಂಗಾವಲು ಪಡೆಯಿಂದಾಗಿ ಸಂಚಾರ ವಿಳಂಬ ಉಂಟಾಗಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ ಇಂಜಿನಿಯರಿಂಗ್ ಪರೀಕ್ಷೆಗೆ ಸರಿಯಾದ ಸಮಯಕ್ಕೆ ತಲುಪಲಾಗದೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಸೋಮವಾರ ವಿಶಾಖಪಟ್ಟಣಂನಲ್ಲಿ ಇಂತಹ ಘಟನೆ ನಡೆದಿದ್ದು, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಬರ್ತಿದ್ದಾರೆ ಅನ್ನೋ ಕಾರಣಕ್ಕೆ ರಸ್ತೆಗಳನ್ನು ಮುಚ್ಚಿ ಜನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಬೆಳಗ್ಗೆ 8.30ಕ್ಕೆ ಪರೀಕ್ಷಾ ಕೊಠಡಿ ತಲುಪಬೇಕಿದ್ದ ವಿದ್ಯಾರ್ಥಿಗಳು ರಸ್ತೆಯಲ್ಲೇ ಉಳಿಯಬೇಕಾಯಿತು. ಪರೀಕ್ಷೆ ಇದೆ ನಮ್ಮನ್ನು ಬಿಟ್ಟು ಬಿಡಿ ಎಂದು ವಿದ್ಯಾರ್ಥಿಗಳು ಎಷ್ಟೇ ಮನವಿ ಮಾಡಿದರೂ ಸಹ ಪವನ್ ಕಲ್ಯಾಣ್ ಬೆಂಗಾವಲು ಪಡೆ ಅವರನ್ನು ಬಿಟ್ಟಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಜೆಇಇ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಪೆಂಡುರ್ತಿಯ ಚಿನ್ನಮುಸಿಡಿವಾಡದಲ್ಲಿರುವ ಐಒಎನ್ ಡಿಜಿಟಲ್ ವಲಯದಲ್ಲಿ ಬೆಳಿಗ್ಗೆ 8:30 ಕ್ಕೆ ಜಂಟಿ ಪ್ರವೇಶ ಪರೀಕ್ಷೆ 2025 ಕ್ಕೆ ಹಾಜರಾಗಬೇಕಿತ್ತು. ಪವನ್ ಕಲ್ಯಾಣ್ ಅವರ ಬೆಂಗಾವಲು ಪಡೆಯ ಸಂಚಾರ ನಿರ್ಬಂಧಗಳು ವಿಳಂಬವಾಗಿದ್ದರಿಂದ ತಮ್ಮ ಮಕ್ಕಳಿಗೆ ಪರೀಕ್ಷೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಹಲವಾರು ಪೋಷಕರು ಆರೋಪಿಸಿದ್ದಾರೆ.