ರಾಜ್ಯಸುದ್ದಿ

ಜೈಲಿನ ಕತ್ತಲೆಯಿಂದ ಹೊರಬಂದ ದರ್ಶನ್: 78 ದಿನಗಳ ಬಳಿಕ ‘ಸೂರ್ಯ ದರ್ಶನ’

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲಿನ ಕಂಬಿ ಹಿಂದೆ 78 ದಿನ ಕಳೆದ ನಟ ದರ್ಶನ್‌ಗೆ ಇಂದು ‘ಬಿಗ್ ಡೇ’. ಕೋರ್ಟ್ ವಿಚಾರಣೆಗಾಗಿ ಜೈಲಿನಿಂದ ಹೊರಬರುತ್ತಿರುವ ದರ್ಶನ್‌ಗೆ ಎರಡು ತಿಂಗಳ ಬಳಿಕ ಮೊದಲ ಬಾರಿಗೆ ಸೂರ್ಯನ ಬೆಳಕು ಕಾಣುವ ಭಾಗ್ಯ ಸಿಕ್ಕಿದೆ.

ಕತ್ತಲೆ ಕೋಣೆಯ ‘ದಾಸ’
ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನ ಕತ್ತಲೆ ಕೋಣೆಗೆ ಸ್ಥಳಾಂತರಗೊಂಡಿದ್ದರು. ಹಾಸಿಗೆ, ದಿಂಬು, ಸೂರ್ಯನ ಬೆಳಕು – ಯಾವ ಸೌಲಭ್ಯವೂ ಇಲ್ಲದೆ ದರ್ಶನ್ ಕಳೆದ ಎರಡು ತಿಂಗಳು ಕಷ್ಟದ ದಿನಗಳನ್ನು ಕಳೆದಿದ್ದಾರೆ.
ಕೋರ್ಟ್‌ಗೆ ದರ್ಶನ್‌ ಮನವಿ ಸಲ್ಲಿಸಿ “ಸೂರ್ಯನ ಬೆಳಕಿಲ್ಲದೆ ಆರೋಗ್ಯ ಹದಗೆಡುತ್ತಿದೆ” ಎಂದು ದೂರು ನೀಡಿದರೂ, ಕೋರ್ಟ್ ಕಠಿಣ ನಿಲುವು ತಾಳಿತು. ಅಕ್ಟೋಬರ್ 29ರಂದು ತೀರ್ಪು ಹೊರಬಂದು ಕೇವಲ ಕೆಲವು ಮೂಲಭೂತ ಸೌಕರ್ಯಗಳು ಮಾತ್ರ ನೀಡಲು ಆದೇಶಿಸಿತು, ಆದರೆ ಬಿಸಿಲಿಗೆ ಹೋಗಲು ಅನುಮತಿ ನಿರಾಕರಿಸಲಾಯಿತು.

ಇಂದು ಕೋರ್ಟ್ ವಿಚಾರಣೆ – ‘ಡಿ ಗ್ಯಾಂಗ್’ಗೆ ಬಿಗ್ ಡೇ
ಇಂದು ದರ್ಶನ್ ಹಾಗೂ ಉಳಿದ 16 ಆರೋಪಿಗಳು ಕೋರ್ಟ್ ಎದುರು ಹಾಜರಾಗುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳ ಮೇಲೆ ಯಾವ ಸೆಕ್ಷನ್‌ಗಳಡಿ ದೋಷಾರೋಪ ನಿಗದಿಯಾಗುತ್ತದೆ ಎಂಬುದು ಇಂದು ಸ್ಪಷ್ಟವಾಗಲಿದೆ. ವಿಚಾರಣೆ ಪ್ರಾರಂಭವಾಗುತ್ತಿರುವುದರಿಂದ ದರ್ಶನ್ ಮತ್ತು ಅವರ ಅಭಿಮಾನಿಗಳ ಕಣ್ಣುಗಳು ಕೋರ್ಟ್‌ನತ್ತ ನೆಟ್ಟಿವೆ.

‘ಓ ಸೂರ್ಯ ನಿನಗೆ ನಮನ’ ಕ್ಷಣ
78 ದಿನಗಳ ಬಳಿಕ ಜೈಲಿನ ಗೋಡೆಗಳಿಂದ ಹೊರಬರುತ್ತಿರುವ ದರ್ಶನ್‌ಗೆ ಇಂದು ಸೂರ್ಯ ದರ್ಶನವಾಗಲಿದೆ. ಅವರದೇ ಸಿನಿಮಾದ ಹಾಡು “ಓ ಸೂರ್ಯ ನಿನಗೆ ನಮನ” ನೆನಪಾಗುವುದು ಖಚಿತ. ಕತ್ತಲೆಯ ಮಧ್ಯೆ ಕಳೆದ ದಿನಗಳ ಬಳಿಕ ಇಂದು ಅವರಿಗೆ ಸೂರ್ಯೋದಯದ ನಿಜವಾದ ಅರ್ಥ ಅರಿವಾಗಬಹುದು.

 

Comments (0)

Your email address will not be published. Required fields are marked *

Back to top button