ಹರಿಯಾಣದಲ್ಲಿ ಕಾಂಗ್ರೆಸ್ಗೆ ಭಾರೀ ಸೋಲುಂಟಾಗಿದೆ. ಹರಿಯಾಣದಲ್ಲಿ ಜಿಲೇಬಿ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಬಿಜೆಪಿ ನಾಯಕರು ಗೇಲಿ ಮಾಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿಯ ಅನಿರೀಕ್ಷಿತ ವಿಜಯದ ನಂತರ ಬಿಜೆಪಿ ಬೆಂಬಲಿಗರು ರಾಹುಲ್ ಗಾಂಧಿಯವರ ಜಿಲೇಬಿ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.
ನವದೆಹಲಿ: ಹರಿಯಾಣ ಬಿಜೆಪಿ ಘಟಕವು ಮಂಗಳವಾರ ಐತಿಹಾಸಿಕ ಮೂರನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದನ್ನು ಸಂಭ್ರಮದಿಂದ ಆಚರಿಸಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಅವರ ದೆಹಲಿ ಕಚೇರಿಗೆ ಬಿಜೆಪಿ 1 ಕೆಜಿ ಜಿಲೇಬಿಯನ್ನು ಕಳುಹಿಸಿದೆ. ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಜಿಲೇಬಿ ಟ್ರೆಂಡಿಂಗ್ನಲ್ಲಿದೆ.
ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷದ ಎಲ್ಲಾ ಕಾರ್ಯಕರ್ತರ ಪರವಾಗಿ ರಾಹುಲ್ ಗಾಂಧಿಯವರ ಮನೆಗೆ ಜಿಲೇಬಿಯನ್ನು ಕಳುಹಿಸಲಾಗಿದೆ ಎಂದು ಬಿಜೆಪಿ ಎಕ್ಸ್ನಲ್ಲಿ ತಿಳಿಸಿದೆ. ದೆಹಲಿ ಮೂಲದ ಫುಡ್ ಡೆಲಿವರಿ ಆ್ಯಪ್ ಆದ ಸ್ವಿಗ್ಗಿಯ ಅಪ್ಲಿಕೇಶನ್ನ ಸ್ಕ್ರೀನ್ಶಾಟ್ ಅನ್ನು ಎಕ್ಸ್ನಲ್ಲಿ ಲಗತ್ತಿಸಲಾಗಿದೆ. ರಾಹುಲ್ ಗಾಂಧಿಗೆ ಸ್ವಿಗ್ಗಿಯಲ್ಲಿ ಜಿಲೇಬಿ ಕಳುಹಿಸಲಾಗಿದ್ದು, ಕ್ಯಾಶ್ ಆನ್ ಡೆಲಿವರಿ ಆಯ್ಕೆ ನೀಡಲಾಗಿದೆ! ರಾಹುಲ್ ಗಾಂಧಿಯವರೇ ಹಣ ಪಾವತಿಸಿ ಈ ಜಿಲೇಬಿ ಬಾಕ್ಸ್ ಪಡೆಯಬೇಕಾಗುತ್ತದೆ.
ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಜಿಲೇಬಿಯನ್ನು ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡುವುದರ ಜೊತೆಗೆ ಉದ್ಯೋಗ ಮತ್ತು ಆದಾಯವನ್ನು ಸೃಷ್ಟಿಸಲು ರಫ್ತು ಮಾಡಲಾಗುತ್ತಿದೆ ಎಂದು ಮಾತನಾಡಿದ್ದರು. ಕೇಂದ್ರದ ಜಿಎಸ್ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಿಂದ ಜಿಲೇಬಿ ಮಾರಾಟಗಾರರು ಹಾನಿಗೊಳಗಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು