
ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟರಾಜ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರ ಹಾಕಿ ಅಭಿನಂದಿಸಿದ್ದಾರೆ. ಗಂಧದ ಹಾರ ಹಾಕಿ ಸಿಎಂ ಸನ್ಮಾನ ಮಾಡಿದ್ದಾರೆ. ಗಿಲ್ಲಿ ನಟನ ಭುಜದ ಮೇಲೆ ಕೈ ಹಾಕಿ ಪೋತ್ಸಾಹಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಡದಪುರ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ಗಿಲ್ಲಿ ನಟರಾಜ್, ಬಿಗ್ಬಾಸ್ ಮನೆಯಲ್ಲಿ ತಮ್ಮ ವಿಶಿಷ್ಟ ಮಾತಿನ ಶೈಲಿ ಮತ್ತು ನೈಜ ವ್ಯಕ್ತಿತ್ವದಿಂದ ಕನ್ನಡಿಗರ ಮನಗೆದ್ದಿದ್ದರು. ಈ ಸಾಧನೆಯನ್ನು ಮೆಚ್ಚಿದ ಸಿಎಂ ಸಿದ್ದರಾಮಯ್ಯ, “ಸಾಮಾನ್ಯ ಹುಡುಗನೊಬ್ಬ ತನ್ನ ಪರಿಶ್ರಮ ಮತ್ತು ಜನರ ಪ್ರೀತಿಯಿಂದ ಈ ಮಟ್ಟಕ್ಕೆ ಬೆಳೆದಿರುವುದು ಸಂತಸದ ವಿಷಯ” ಎಂದು ಹೇಳಿ ಅವರ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿದರು.
ಈ ವೇಳೆ ಸಚಿವ ಬೈರತಿ ಬಸವರಾಜ್ ಹಾಗೂ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಉಪಸ್ಥಿತರಿದ್ದರು. ಗಿಲ್ಲಿ ಅವರೊಂದಿಗೆ ಬಿಗ್ಬಾಸ್ ಜರ್ನಿಯ ಅನುಭವಗಳ ಬಗ್ಗೆ ಸಿಎಂ ಕೆಲಕಾಲ ಚರ್ಚಿಸಿದರು.
ಬಿಗ್ಬಾಸ್ ಇತಿಹಾಸದಲ್ಲೇ ಈ ಬಾರಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಗಿಲ್ಲಿ ನಟರಾಜ್ ಪ್ರಥಮ ಸ್ಥಾನ ಪಡೆದರೆ, ರಕ್ಷಿತಾ ಪ್ರಥಮ ರನ್ನರ್ ಅಪ್ ಹಾಗೂ ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಅತಿ ಹೆಚ್ಚು ಜನಮತ ಗಳಿಸುವ ಮೂಲಕ ಗಿಲ್ಲಿ ಅವರು ಅರ್ಹವಾಗಿಯೇ ಟ್ರೋಫಿ ಮುಡಿಗೇರಿಸಿಕೊಂಡಿದ್ದರು.




