ಕಲಬುರಗಿ: ರಾಜ್ಯ ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಹಿನ್ನೆಲೆಯಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ನಿವಾಸಕ್ಕೆ ಸಿಐಟಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ದಾಖಲೆ ಸಂಗ್ರಹಿಸಿದ್ದಾರೆ. ಇದು ರಾಜ್ಯ ಸರ್ಕಾರದ ಪ್ರತೀಕಾರದ ಕ್ರಮ ಎಂದು ವಲ್ಯಾಪುರೆ ಕಿಡಿಕಾರಿ ದ್ದಾರೆ. 2022ರಲ್ಲಿ ಸುನೀಲ್ ವಲ್ಯಾಪುರೆ ಮತ್ತು ಪುತ್ರ ವಿನಯ್ ನಿಗಮದ 12 ಕೋಟಿ ರೂ. ದುರ್ಬಳಕೆ ಮಾಡಿರುವ ಆರೋಪ ಕೇಳಿಬಂದಿತ್ತು.
ನಕಲಿ ಫಲಾನು ಭವಿಗಳನ್ನು ಸೃಷ್ಟಿಸಿ ಅವ್ಯವಹಾರ ನಡೆಸಿರುವ ಕುರಿತು ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ನಗರದ ಸಂತೋಷ ಕಾಲೋನಿಯ ವಲ್ಯಾಪುರೆ ಮನೆಗೆ ಆಗಮಿಸಿದ ಸಿಐಡಿ ಡಿವೈಎಸ್ಪಿ ಅಸ್ಲಂ ಭಾಷಾ ನೇತೃತ್ವದಲ್ಲಿ ಎಂಟು ಜನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ನ್ಯಾಯಾಲಯದ ಸರ್ಚ್ ವಾರೆಂಟ್ ತೋರಿಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ಈ ವೇಳೆ ವಲ್ಯಾಪುರೆ ಮನೆಯಲ್ಲೇ ಇದ್ದರು ಎಂದು ಮೂಲಗಳು ತಿಳಿಸಿವೆ.
ಇದೊಂದು ಅಚ್ಚರಿಯ ಬೆಳವಣಿಗೆ. ನನ್ನ ಮನೆಯಲ್ಲಿ ಬದನೆಕಾಯಿನೂ ಸಿಗೋದಿಲ್ಲ ಎಂದು ಎಂಎಲ್ಸಿ ಸುನೀಲ ವಲ್ಯಾಪುರೆ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಭೋವಿ ನಿಗಮದಲ್ಲಿ ಅವ್ಯವಹಾರ ಆಗಿದೆ ಎಂದು ನಾನೇ ಧ್ವನಿ ಎತ್ತಿ ಕಳೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಸ್ತಾವನೆ ಸಲ್ಲಿಸಿ ಮಾತನಾಡಿದ್ದೆ. ಈ ಹಗರಣದಲ್ಲಿ ಕೆಲವು ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ. ಅವರೇ ನನ್ನ ಮೇಲೆ ಗೂಬೆ ಕೂರಿಸಲು ಈ ರೀತಿ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ. ನಮ್ಮ ಮನೆಯಲ್ಲಿ ಏನಾದರೂ ಸಿಗುತ್ತೋ ಏನೋ ನೋಡುತ್ತಿದ್ದಾರೆ ಎಂದರು.
6 ಗಂಟೆ ಶೋಧ
ಸಿಐಡಿ ಡಿಎಸ್ಪಿ ಹಾಗೂ ನಾಲ್ವರು ಸಿಬ್ಬಂದಿ ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆವರೆಗೆ ಶೋಧ ನಡೆಸಿದ್ದಾರೆ. ಈ ವೇಳೆ ಮನೆಯ ಇಂಚಿಂಚು ಜಾಲಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವು ದಾಖಲೆಗಳು ಹಾಗೂ ಮನೆಯಲ್ಲಿ ಕಂಪ್ಯೂಟರ್ ಸೇರಿ ಡಿಜಿಟಲ್ ದಾಖಲೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಕೆಲವು ದಾಖಲೆ ಕೊಂಡೊಯ್ದಿದ್ದಾರೆ ಎಂಬ ಮಾಹಿತಿ ಇದೆ.
ಏನಿದು ಪ್ರಕರಣ?
- 1 2022ರಲ್ಲಿ ಸುನೀಲ್ ವಲ್ಯಾಪುರೆ, ಪುತ್ರ ವಿನಯ್ ವಿರುದ್ಧ ಕೇಳಿಬಂದ ಆರೋಪ
- ನಕಲಿ ಫಲಾನುಭವಿಗಳ ಸೃಷ್ಟಿಸಿ ಅವ್ಯವಹಾರ ಮಾಡಿದ್ದಾರೆಂದು ದೂರು ದಾಖಲು
- ಈ ಹಿನ್ನೆಲೆಯಲ್ಲಿ ಸಿಐಡಿಯ 8 ಅಧಿ ಕಾರಿಗಳ ತಂಡದಿಂದ ವಲ್ಯಾಪುರೆ ಮನೆಗೆ ದಾಳಿ
- ಸರ್ಚ್ ವಾರಂಟ್ ತೋರಿಸಿ ಪರಿಶೀಲನೆ