#Exclusive NewsTop News

ವಿಶೇಷ ಚೇತನರ ಆರೈಕೆದಾರರಿಗೂ ಸಿಗುತ್ತೆ 1000 ರೂ: ಸಿಎಂ ಸಿದ್ದರಾಮಯ್ಯ

ವಿಶೇಷ ಚೇತನರಿಗೆ ಉದ್ಯೋಗ ಒದಗಿಸುವ ಸಲುವಾಗಿಯೇ ಸಮಿತಿಯೂ ರಚನೆಯಾಗಿದೆ. ಕಳೆದ ಬಜೆಟ್‌ನಲ್ಲಿ ವಿಶೇಷ ಚೇತನರ ಕಲ್ಯಾಣಕ್ಕೆ ₹44 ಕೋಟಿ ನಿಗದಿಪಡಿಸಲಾಗಿತ್ತು. ಈ ಬಜೆಟ್‌ನಲ್ಲಿ ಕೇವಲ 10 ಕೋಟಿ ನಿಗದಿಪಡಿಸಲಾಗಿದೆ. ಈ ಹಣ ಕಡಿಮೆ ಆಯಿತು ಎಂಬ ಕುರಿತು ಚರ್ಚೆ ನಡೆದಿದೆ. ಹೀಗಾಗಿ ನಾವು ಪೂರಕ ಅಂದಾಜಿನಲ್ಲಿ ಇದಕ್ಕೆ ₹44 ಕೋಟಿ ನೀಡಲಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಡಿ.04): ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ವಿಶೇಷ ಚೇತನರ ಆರೈಕೆದಾರರಿಗೆ ₹1000 ಮಾಸಿಕ ಭತ್ಯೆ ನೀಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಚಾಲನೆ ನೀಡಿದ್ದು, ಈ ವೇಳೆ ಅಂಗವಿಕಲರ ಕಲ್ಯಾಣ ಇಲಾಖೆ ಬಜೆಟ್‌ನಲ್ಲಿ ಕಡಿಮೆಯಾಗಿದ್ದ ₹44 ಕೋಟಿ ಅನುದಾನವನ್ನು ಪೂರಕ ಅಂದಾಜಿನಲ್ಲಿ ಕೊಡುವುದಾಗಿ ಘೋಷಿಸಿದರು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ, ಆರೈಕೆದಾರರ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಪ್ರಸ್ತುತ ಸುಮಾರು 15 ಲಕ್ಷ ವಿಶೇಷ ಚೇತನರರಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ನಾಲ್ಕು ಬಗೆಯ (ಮಿದುಳು ಪಾರ್ಶವಾಯು, ಮಸ್ಕುಲರ್ ಡಿಸ್ಟೋಫಿ, ಪಾರ್ಕಿನ್ಸನ್ ಕಾಯಿಲೆ, ಮಲ್ಟಿಪಲ್ ಸ್ ಕೈರೋಸಿಸ್) ವಿಶೇಷ ಚೇತನರರನ್ನು ಆರೈಕೆ ಮಾಡುವವರಿಗೆ ಮಾಸಿಕ 1000 ನೀಡುವ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ವಿಶೇಷ ಚೇತನರಿಗೆ ಉದ್ಯೋಗ ಒದಗಿಸುವ ಸಲುವಾಗಿಯೇ ಸಮಿತಿಯೂ ರಚನೆಯಾಗಿದೆ. ಕಳೆದ ಬಜೆಟ್‌ನಲ್ಲಿ ವಿಶೇಷ ಚೇತನರ ಕಲ್ಯಾಣಕ್ಕೆ ₹44 ಕೋಟಿ ನಿಗದಿಪಡಿಸಲಾಗಿತ್ತು. ಈ ಬಜೆಟ್‌ನಲ್ಲಿ ಕೇವಲ 10 ಕೋಟಿ ನಿಗದಿಪಡಿಸಲಾಗಿದೆ. ಈ ಹಣ ಕಡಿಮೆ ಆಯಿತು ಎಂಬ ಕುರಿತು ಚರ್ಚೆ ನಡೆದಿದೆ. ಹೀಗಾಗಿ ನಾವು ಪೂರಕ ಅಂದಾಜಿನಲ್ಲಿ ಇದಕ್ಕೆ ₹44 ಕೋಟಿ ನೀಡಲಿದ್ದೇವೆ ಎಂದರು.

ಬಜೆಟ್‌ನಲ್ಲಿ ಘೋಷಿಸಿದಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ತಲಾ 2 ಕೋಟಿ ವೆಚ್ಚದಲ್ಲಿ 10 ಬುದ್ದಿಮಾಂಧ್ಯ ಮಕ್ಕಳ ವಸತಿ ಶಾಲೆ ಆರಂಭಿಸಲಾಗುತ್ತಿದೆ. ಒಟ್ಟು 13 ವಸತಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲಾಗುವುದು. ವಿಶೇಷ ಚೇತನರ ಅವಲಂಬಿತರಿಗೆ ನೀಡಲಾಗುವ ಮರಣ ಪರಿಹಾರ ನಿಧಿಯನ್ನು 2023ರಲ್ಲಿ ₹50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ನೆರವು ಹೆಚ್ಚಿಸಲು ಕೇಂದ್ರಕ್ಕೆ ಪತ್ರ:

ಸರ್ಕಾರದ ಸಿ, ಡಿ ಹುದ್ದೆಗಳಲ್ಲಿ ಶೇ.5 ಹಾಗೂ ಎ, ಬಿ ಹುದ್ದೆಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಶೇ.40ರಿಂದ 74 ಶೇ. ಅಂಗವಿಕಲತೆ ಇದ್ದರೆ ಮಾಸಿಕ ₹800, ಶೇ. 75ಕ್ಕಿಂತ ಹೆಚ್ಚಾಗಿದ್ದರೆ ₹1400 ಕೊಡುತ್ತಿದ್ದೇವೆ. ಕೇಂದ್ರ ಮಾಸಿಕ ನೀಡುವ 2500 ಅನ್ನು ಹೆಚ್ಚಳ ಮಾಡುವಂತೆ ಪತ್ರ ಬರೆಯಲಾಗುವುದು ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ವಿಶೇಷ ಚೇತನರು ವಿಕಲತೆಯನ್ನು ಸವಾಲಾಗಿ ಸ್ವೀಕರಿಸಿ ಮುನ್ನ ಡೆಯಬೇಕು. ಮನೆ ಬಾಗಿಲಿಗೆ ಬಂದು ಇಲಾಖೆಯ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಈ ವೇಳೆ ವಿಶೇಷ ಚೇತನರ ಹಕ್ಕುಗಳ ಅಧಿನಿಯಮ, ರಾಜ್ಯ ನಿಯಮಾವಳಿಗಳ ಕನ್ನಡ ಅವತರಣಿಕೆ, 2025ರ ಬ್ರೆಲ್ ಕ್ಯಾಲೆಂಡರ್‌ನ್ನು ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಬೆಂಗಳೂರು ಬಾಲ ಭವನ ಸೊಸೈಟಿಯ ಪಿ.ಆರ್.ನಾಯ್ಡು, ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಡಾ.ಇಂದುಮತಿರಾವ್, ದಾಸ್ ಸೂರ್ಯವಂತಿ ಮತ್ತಿತರರಿದ್ದರು. ಐವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್ ನೀಡಲಾಯಿತು. ವಿಕಲಚೇ ತನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ವ್ಯಕ್ತಿ ಗಳು, ಸಂಸ್ಥೆಗಳಿಗೆ ಬಹುಮಾನ ನೀಡಲಾಯಿತು.

Comments (0)

Your email address will not be published. Required fields are marked *

Back to top button