ಬೀದರ್: ಹೆರಿಗೆ ವೇಳೆ ಬ್ರಿಮ್ಸ್ ವೈದ್ಯರು ಮಾಡಿದ ಮಹಾ ಎಡವಟ್ಟಿನಿಂದ ನವಜಾತ ಶಿಶುವಿನ ಬಲಗಾಲ ಮೂಳೆಯೇ ಮುರಿದಿದೆ. ಹೆರಿಗೆ ಬಳಿಕ ಸ್ಕ್ಯಾನಿಂಗ್ ಮಾಡಿಸಿದಾಗ ಬಲಗಾಲಿನ ತೊಡೆಯ ಮೂಳೆ ಮುರಿದಿರುವುದು ಬೆಳಕಿಗೆ ಬಂದಿದೆ. ಮೂಳೆ ಮುರಿತದಿಂದಾಗಿ ಒಂದು ತಿಂಗಳ ಹಸುಗೂಸು ನೋವು ತಾಳಲಾರದೇ ನರಳಾಡುತ್ತಿದೆ. ಹಸುಗೂಸಿನ ಚಿಕಿತ್ಸೆಗಾಗಿ ಬಡ ಕುಟುಂಬ ಪರದಾಡುತ್ತಿದ್ದು, ಶಾಶ್ವತ ಅಂಗವೈಕಲ್ಯದ ಭೀತಿ ಶುರುವಾಗಿದೆ.
ಸಹಜ ಹೆರಿಗೆ ಆಗುತ್ತದೆಂದು ವೈದ್ಯರು ಹೇಳಿದ್ದರು. ಆದರೆ, ನಂತರ ಸಹಜ ಹೆರಿಗೆ ಕಷ್ಟ ಎಂದು ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಆದ ನಂತರ ಎರಡು ಗಂಟೆ ಕಳೆದರೂ ಮಗು ಕಾಲು ಅಲ್ಲಾಡಿಸಲಾಗಿದೆ ಅಳುವುದಕ್ಕೆ ಪ್ರಾರಂಭಿಸಿದೆ. ಹಸುಗೂಸಿನ ಕುಟುಂಬದ ಸದಸ್ಯರು ಮಗು ಅಳುವುದನ್ನು ನೋಡಿ ವೈದ್ಯರಿಗೆ ತೋರಿಸಿದ್ದಾರೆ. ವೈದ್ಯರು ಸ್ಕ್ಯಾನ್ ಮಾಡಿಸಿದಾಗ ಮಗುವಿನ ಬಲಗಾಲಿನ ತೊಡೆಯ ಮೂಳೆ ಮುರಿದಿರುವುದು ಗೊತ್ತಾಗಿದೆ.
ಮೂಳೆ ಮುರಿದಿರುವ ಬಗ್ಗೆ ವೈದ್ಯರನ್ನು ಪ್ರಶ್ನಿಸಿದಾಗ, ಸಿಸೇರಿಯನ್ ಮಾಡುವಾಗ ಮೂಳೆ ಮುರಿದಿದೆ. ಇದೆಲ್ಲಾ ಸಹಜ ಎಂದು ಹೇಳಿ ಕುಟುಂಬಸ್ಥರನ್ನು ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ, ನಮಗೆ ನ್ಯಾಯ ಬೇಕು ಎಂದು ಶ್ರೀದೇವಿ ಗಂಡ ರಾಜು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ನರ್ಸ್, ಟ್ರೈನಿ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಹಿರಿಯ ವೈದ್ಯರ ಮಾರ್ಗದರ್ಶನ ಪಡೆಯದೆಯೇ ಹೆರಿಗೆ ಮಾಡಿಸಿದ್ದಾರೆ. ಇದರ ಪರಿಣಾಮ ಎರಡು ಹಸುಗೂಸುಗಳ ಕಾಲಿನ ಮೂಳೆ ಮುರಿದಿದೆ. ಇದಕ್ಕೆ ಕಾರಣರಾದ ವೈದ್ಯರ ಮೇಲೆ ಕ್ರಮ ಕೈಗೊಳ್ಳಿ. ಮುಂದೆ ಇಂತಹ ಅನಾಹುತಗಳು ಆಗದಂತೆ ನೋಡಿಕೊಳ್ಳಿ ಎಂದು ಬ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಸಂತ್ರಸ್ತರು ಮನವಿ ಮಾಡಿದ್ದಾರೆ. ಆದರೆ, ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ. ಇದು ಸಹಜವಾಗಿಯೇ ಹಸುಗೂಸುಗಳ ಕುಟುಂಬಸ್ಥರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ.
ಒಟ್ಟಿನಲ್ಲಿ ಬ್ರಿಮ್ಸ್ ಸಿಬ್ಬಂದಿಗಳು ಮಾಡಿದ ಮಹಾ ಎಡವಟ್ಟಿನಿಂದ ನವಜಾತ ಶಿಶುವಿನ ಕಾಲಿನ ಮೂಳೆ ಮುರಿದಿದ್ದು, ಯಾರೋ ಮಾಡಿದ ತಪ್ಪಿಗೆ ಇನ್ನ್ಯಾರಿಗೋ ಶಿಕ್ಷೆ ಎಂಬಂತೆ ಮಗು ಹಾಗೂ ಮಗುವಿನ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಈ ಬಗ್ಗೆ ಬ್ರಿಮ್ಸ್ ನಿರ್ದೇಶಕರು ಉಡಾಫೆ ಉತ್ತರ ನೀಡುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನ ಕಾದು ನೋಡೋಣ.