ಬೆಳಗಾವಿ: ಹೊಸ ವರ್ಷಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಆಗಲಿದ್ದು, ಆ ಬಳಿಕ ರಾಜ್ಯದಲ್ಲೂ ಪದಾಧಿಕಾರಿಗಳ ಬದಲಾವಣೆ ಆಗಲಿದೆ.
ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಬದಲಾವಣೆ ಬಹುತೇಕ ಜನವರಿಯಲ್ಲಿ ಆರಂಭವಾಗ ಬಹುದು. ಆಗ ಕರ್ನಾಟಕದಲ್ಲೂ ಆಗಲಿದೆ ಎಂದು ಮೂಲಗಳು ಹೇಳಿವೆ.
ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ರಾಷ್ಟ್ರೀಯ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಹುದು. ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಹುದ್ದೆಯ ಜತೆಗೆ ಯಾವುದಾದರೂ ರಾಜ್ಯದ ಉಸ್ತುವಾರಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಉತ್ಸಾಹದಿಂದ ಕೆಲಸ ಮಾಡದ ಹಾಗೂ ನಿಷ್ಕ್ರಿಯ ಪದಾಧಿಕಾರಿಗಳನ್ನು ಕೈಬಿಡುವ ಸಾಧ್ಯತೆ ಇದೆ. ಅನುಭವಿಗಳು ಮತ್ತು ಸಂಘಟನೆಗಾಗಿ ದುಡಿಯು ವವರನ್ನು ನೇಮಿಸಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.
ವಿವಿಧ ರಾಜ್ಯಗಳಲ್ಲಿ ಚುನಾವಣೆ ಇದ್ದ ಕಾರಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ವರಿಷ್ಠರು ಗಮನಹರಿಸಲು ಸಾಧ್ಯ ವಾಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಅಧಿಕಾರ ಗ್ರಹಣವೂ ಆಗಿದೆ. ಇನ್ನು ಸಂಘಟನೆಯಲ್ಲಿ ಬದಲಾವಣೆಗಳ ಕಾರ್ಯಕ್ಕೆ ಕೈ ಹಾಕಲಿದ್ದಾರೆ. ಹಲವು ರಾಜ್ಯ ಘಟಕಗಳ ಅಧ್ಯಕ್ಷರ, ಪದಾಧಿಕಾರಿಗಳ ಬದಲಾವಣೆ ಬಾಕಿ ಉಳಿದಿದೆ. ಕರ್ನಾಟಕದಲ್ಲಿ ಪಕ್ಷದ ಒಳ ಜಗಳದ ಸಂಪೂರ್ಣ ಮಾಹಿತಿ ಅವರ ಗಮನದಲ್ಲಿದೆ. ಸೂಕ್ತ ಕ್ರಮ ತೆಗೆದುಕೊಳ್ಳುವ ಸಮಯ ಸನ್ನಿಹಿತ ವಾಗಿದೆ ಎಂದು ಅವರು ಹೇಳಿದರು.
‘ಬಣ ಜಗಳಕ್ಕೆ ಅಂತ್ಯ ಹಾಡುವುದು ನಿಶ್ಚಿತ. ಪಕ್ಷ ಮತ್ತು ಸಿದ್ಧಾಂತ ನಿಷ್ಠರನ್ನು ದೂರ ಇಡುವ ಕೆಲಸ ಮಾಡುವುದಿಲ್ಲ. ಅವಿಶ್ವಾಸದ ಕೊರತೆ ನೀಗಿಸಲು ಪ್ರಮುಖ ನಾಯಕರನ್ನು ಕರೆಸಿ ಮಾತುಕತೆ ನಡೆಸಲಿದ್ದಾರೆ’ ಎಂದು ತಿಳಿಸಿದರು.
ರಾಷ್ಟ್ರೀಯ ಅಧ್ಯಕ್ಷರಾಗಿ ಅನುರಾಗ್?: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ, ಸಂಸದ ಅನುರಾಗ್ ಸಿಂಗ್ ಠಾಕೂರ್ ನೇಮಕವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
‘ಕೇಂದ್ರ ಸಚಿವರಾಗಿ ವಿವಿಧ ಖಾತೆ ಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿ ಸಿದ್ದ ಅನುರಾಗ್ ಪಕ್ಷ ಸಂಘಟನೆಯಲ್ಲೂ ಪಳಗಿದ್ದಾರೆ. ಅವರನ್ನು ಅಧ್ಯಕ್ಷರಾಗಿ ನೇಮಿಸಲು ಈ ಬಾರಿ ಸಂಪುಟಕ್ಕೆ ಸೇರ್ಪಡೆ ಗೊಳಿಸಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.