ಬೆಂಗಳೂರು: ನನ್ನ ವಿರುದ್ಧ ಏನೇ ದಾಖಲೆಗಳು, ವೀಡಿಯೋಗಳು ಇದ್ರು ಒಂದು ಕ್ಷಣವೂ ಯೋಚನೆ ಮಾಡದೆ, ತಕ್ಷಣ ಬಿಡುಗಡೆ ಮಾಡಲಿ. ಶುಭ ಮುಹೂರ್ತಕ್ಕೆ ಕಾದು ಕುಳಿತುಕೊಳ್ಳುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಹಿರಂಗವಾಗಿ ಸವಾಲ್ ಹಾಕಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಲೋಚಿಸಿ ಬೆಂಗಳೂರಿನಲ್ಲಿರುವ ಬಿ.ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿಂದು ಸಮಾಲೋಚನ ಸಭೆಯಲ್ಲಿ ಮಾತನಾಡಿದ್ರು. ಸಭೆಯ ಬಳಿಕ ವಿಪಕ್ಷಗಳೊಂದಿಗೆ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯಾಧಾರ ಇದೆ, ಬಿಡುಗಡೆ ಮಾಡ್ಲಾ? ಅನ್ನೋ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆಗೆ ಪ್ರತ್ಯತ್ತರ ನೀಡಿದರು.
ದೆಹಲಿಯಲ್ಲಿ ವರಿಷ್ಠರ ಭೇಟಿ ವಿಚಾರ ಕುರಿತು ಮಾತನಾಡಿ ಅವರು, ರಾಜ್ಯದಲ್ಲಿ ಸಂಘಟನಾ ಪರ್ವ ನಡೀತಿದೆ. ನಿನ್ನೆ ಪಕ್ಷದ ವರಿಷ್ಠರ ಭೇಟಿ ಮಾಡಿದ್ದೇನೆ. ಮೂರು ಕ್ಷೇತ್ರಗಳ ಹಿನ್ನಡೆ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ತಿಳಿಸಿದ್ದೇನೆ. ಆದರೆ ಯಾರ ವಿರುದ್ಧ ಚಾಡಿ ಹೇಳೋದು, ಅವರನ್ನು ಉಚ್ಚಾಟನೆ ಮಾಡಿ ಅಂತ ಹೇಳೋದೋ ನಾನು ಹೇಳಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ. ಆದ್ರೆ ಯತ್ನಾಳ್ ವಿರುದ್ಧ ಕ್ರಮ ಆಗಬೇಕು ಅಂತ ಕಾರ್ಯಕರ್ತರ ಅಭಿಪ್ರಾಯ ಇದೆ. ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಪ್ರತ್ಯೇಕವಾಗಿ ಹೋಗ್ತಿದ್ದಾರೆ. ಯತ್ನಾಳ್ ಅವರು ಯಡಿಯೂರಪ್ಪ ಮತ್ತೆ ವಿಜಯೇಂದ್ರಗೆ ಬೈಯ್ಯೋದೆ ಒಂದು ಪದವಿ ಅಂದ್ಕೊಂಡಿದ್ದಾರೆ. ಇವತ್ತು ಮಾಜಿ ಶಾಸಕರು ಬಂದಿದ್ದರು, ಇದರ ಬಗ್ಗೆ ಹೇಳಿದ್ದಾರೆ. ನಾನು ಅವರಿಗೆ ಇದನ್ನು ಬದಿಗೊತ್ತಿ, ಪಕ್ಷ ಸಂಘಟನೆ ಮಾಡಿ ಅಂತಷ್ಟೇ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.