ಯತ್ನಾಳ್ ಆ್ಯಂಡ್ ಟೀಂಗೆ ಡೆಲ್ಲಿಗೆ ಕರೆಸಿಕೊಂಡು ಬುದ್ಧಿ ಹೇಳಿ ಹೈಕಮಾಂಡ್ ಕಳಿಸಿತ್ತು.. ಆದ್ರೆ, ಈಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಪರ ಬಣ ಇವತ್ತು ಪೂರ್ವಭಾವಿ ಸಭೆ ಕರೆದಿದೆ. ಮಾಜಿ ಶಾಸಕರು, ಮಾಜಿ ಸಚಿವರು ರಾತ್ರಿಯೇ ಬೆಣ್ಣೆನಗರಿಯಲ್ಲಿ ಬಿಡಾರ ಹೂಡಿದೆ. ದಾವಣಗೆರೆಯಲ್ಲಿ ಸಂಘಟಿಸುವುದಾಗಿ ಘೋಷಣೆ ಮಾಡಿದ್ದ ಬೃಹತ್ ಸಮಾವೇಶದ ಕುರಿತು ಚರ್ಚೆ ನಡೆಸಲಿದ್ದಾರೆ.
ಯತ್ನಾಳ್ ಬಾಯಿಗೆ ಬೀಗ ಬಿದ್ದಿದೆ. ಇನ್ಮುಂದೆ ಬಹಿರಂಗ ಮಾತನಾಡಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾಗಿದೆ. ಆದ್ರೆ, ಬಿಜೆಪಿಯೊಳಗಿನ ಮುಸುಕಿನ ಗುದ್ದಾಟ ಅಂತ್ಯ ಆಗಿಲ್ಲ. ಇದಕ್ಕೆ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಗುರುತಿಸಿಕೊಂಡಿರುವ ಬಣ ಇವತ್ತು ಸಭೆ ಹಮ್ಮಿಕೊಂಡಿದೆ.
ಬೆಳಿಗ್ಗೆ 11 ಗಂಟೆಗೆ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಕ್ಷ ಸಂಘಟನೆ ಹೆಸರಲ್ಲಿ ಸೇರುತ್ತಿರುವ ಮಾಜಿ ಸಚಿವರು, ಹಾಲಿ ಶಾಸಕರು, 12ಕ್ಕೂ ಅಧಿಕ ಮಾಜಿ ಶಾಸಕರು ಸೇರಿ ಒಟ್ಟು 40ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಭಾಗಿ ಆಗ್ತಿದ್ದಾರೆ. ದಾವಣಗೆರೆ ಶಕ್ತಿ ದೇವತೆ ದುರ್ಗಾಂಬಿಕಾ ದೇವಿ ಪೂಜೆ ಸಲ್ಲಿಸಿ ಬಾತಿ ರೇವಣ ಸಿದ್ದೇಶ್ವರ ದರ್ಶನ ಪಡೆದು ಸಭೆ ನಡೆಸಲಿದ್ದಾರೆ.
ಆದ್ರೆ ಈ ಬಗ್ಗೆ ಎಂ.ಪಿ. ರೇಣುಕಾಸ್ವಾಮಿ ಬೇರೆಯದ್ದೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿವೆ. ಕಾರ್ಯಕರ್ತರಿಗೆ ಶಕ್ತಿ ತುಂಬಲು ಸಭೆ ಸೇರುತಿದ್ದೇವೆ. ನಾವು ಯಾರ ಪರ ಯಾರ ವಿರುದ್ಧ ಸಭೆ ಸೇರುತ್ತಿಲ್ಲ ಅಂತ ರೇಣುಕಾಚಾರ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
ಮತ್ತೊಂದು ಕಡೆ ವಿಜಯೇಂದ್ರ ಪಕ್ಷದ ಸಾರಥ್ಯ ವಹಿಸಿಕೊಂಡು ವರ್ಷ ಕಳೆದಿದೆ. ಅವರ ನೇತೃತ್ವದಲ್ಲಿ 17 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಹೀಗಾಗಿ ಪಕ್ಷವನ್ನು ಇನ್ನಷ್ಟು ಸಬಲಗೊಳಿಸಲು ವಿಜಯೇಂದ್ರ ಕೈ ಬಲಪಡಿಸುವ ಗುರಿ ನಮ್ಮದು ಅಂತ ಈ ತಂಡ ಹೇಳಿಕೊಂಡಿದೆ. ಇನ್ನು, ಈ ಸಭೆಯಲ್ಲಿ ಬೃಹತ್ ಸಮಾವೇಶದ ಕುರಿತು ಚರ್ಚೆ ನಡೆಯಲಿದೆ ಅನ್ನೋದು ಗೊತ್ತಾಗಿದೆ. ಅದೇನೆ ಆದರೂ ಈ ಹೊಸ ಬೆಳವಣಿಗೆ ಮಾತ್ರ ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.