ಅಲ್ಲು ಅರ್ಜುನ್ಗೆ ನಾಂಪಲ್ಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಡಿಸೆಂಬರ್ 4 ರ ರಾತ್ರಿ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ‘ಪುಷ್ಪ 2’ ಸಿನಿಮಾದ ಬೆನಿಫಿಟ್ ಶೋ ವೀಕ್ಷಿಸಲು ಅಲ್ಲು ಅರ್ಜುನ್ ತೆರಳಿದ್ದರು. ಈ ವೇಳೆ ಅಲ್ಲು ಅರ್ಜುನ್ ಅನ್ನು ನೋಡಲು ಜನ ಮುಗಿಬಿದ್ದ ಕಾರಣ ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬುವರು ನಿಧನ ಹೊಂದಿದ್ದರು. ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದ. ಡಿಸೆಂಬರ್ 5 ರಂದು ರೇವತಿಯ ಪತಿ ಭಾಸ್ಕರ್ ಹೈದರಾಬಾದ್ನ ಚೀಕಡಪಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಇದೀಗ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮೃತ ಮಹಿಳೆ ರೇವತಿಯ ಪತಿ ಭಾಸ್ಕರ್, ‘ಕಾಲ್ತುಳಿತಕ್ಕೂ ಅಲ್ಲು ಅರ್ಜುನ್ಗೂ ಸಂಬಂಧವಿಲ್ಲ. ನಾನು ಅಲ್ಲು ಅರ್ಜುನ್ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯಲು ತಯಾರಿದ್ದೇನೆ. ಅಲ್ಲು ಅರ್ಜುನ್ ಬಂಧನ ಆಗುತ್ತಿರುವ ವಿಷಯ ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ.
‘ನಾನು ಆಸ್ಪತ್ರೆಯಲ್ಲಿದ್ದೆ, ಅಲ್ಲು ಅರ್ಜುನ್ ಬಂಧನದ ವಿಷಯ ಮಾಧ್ಯಮಗಳಿಂದ ಗೊತ್ತಾಯ್ತು, ಅಲ್ಲು ಅರ್ಜುನ್ ಇಂದಾಗಿ ನನ್ನ ಪತ್ನಿ ಸಾಯಲಿಲ್ಲ. ನಾನು ಬೇಕಾದರೆ ಈಗ ನೀಡಿರುವ ದೂರನ್ನು ಹಿಂಪಡೆದುಕೊಳ್ಳುತ್ತೇನೆ’ ಎಂದಿದ್ದಾರೆ. ಅಂದಹಾಗೆ ಅಲ್ಲು ಅರ್ಜುನ್, ಮೃತ ಮಹಿಳೆ ರೇವತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿರುವ ಅವರ ಪುತ್ರನ ಚಿಕಿತ್ಸೆಗೆ ಸಂಪೂರ್ಣ ಧನ ಸಹಾಯ ಮಾಡುವ ಭರವಸೆಯನ್ನು ಮೊದಲೇ ನೀಡಿದ್ದರು.
ಆದರೆ ಅಲ್ಲು ಅರ್ಜುನ್ಗೆ ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ಲದೆ, ಕ್ರಿಮಿನಲ್ ಪ್ರಕರಣಗಳಲ್ಲಿ ನೀಡಿರುವ ದೂರನ್ನು ಹಿಂಪಡೆದರೂ ತನಿಖೆ, ವಿಚಾರಣೆ ನಡೆಯುತ್ತಲೇ ಇರುತ್ತದೆ. ಹಾಗಾಗಿ ಈಗ ದೂರುದಾರರು ನೀಡಿರುವ ದೂರು ಹಿಂಪಡೆದರು ಪ್ರಕರಣದ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ.