ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ಮತ್ತು ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಗೇಮ್ ಚೇಂಜರ್ ಜನವರಿ 10 ರಂದು ಸಂಕ್ರಾಂತಿ ಹಬ್ಬದ ಟ್ರೀಟ್ ಆಗಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ದೊಡ್ಡ ಬಜೆಟ್ ಚಿತ್ರವಾಗಿದೆ.
ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಟಿಕೆಟ್ ದರ ಏರಿಕೆಗೆ ಅನುಮತಿ ನೀಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬೆನಿಫಿಟ್ ಶೋ ಟಿಕೆಟ್ಗಳನ್ನು ಈಗ ಪ್ರತಿ ₹600 ಕ್ಕೆ ಮಾರಾಟ ಮಾಡಬಹುದು. ಬೆನಿಫಿಟ್ ಶೋಗಳು ಜನವರಿ 9 ರಂದು ಪ್ರಾರಂಭವಾಗಲಿವೆ. ಹೆಚ್ಚುವರಿಯಾಗಿ, ಜನವರಿ 10 ರಂದು ಆರು ಪ್ರದರ್ಶನಗಳಿಗೆ ಅವಕಾಶ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿದೆ.
ಆಂಧ್ರದಲ್ಲಿ ಸರ್ಕಾರದ ಅನುಮತಿ ಸಿಕ್ಕಿದೆ ಆದರೆ ತೆಲಂಗಾಣದಲ್ಲಿ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಯಾವುದೇ ವಿಶೇಷ ಅನುಮತಿ ನೀಡಲಾಗಿಲ್ಲ. ಇತ್ತೀಚೆಗಷ್ಟೆ ನಡೆದ ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆ ಬಳಿಕ ತೆಲುಗು ಚಿತ್ರರಂಗದ ಮೇಲೆ ಅಸಮಾಧಾನ ವ್ಯಕ್ತಪಡಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಇನ್ನು ಮುಂದೆ ಯಾವುದೇ ಬೆನಿಫಿಟ್ ಶೋ, ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡುವುದಿಲ್ಲ ಎಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ‘ಗೇಮ್ ಚೇಂಜರ್’ ಸಿನಿಮಾದ ನಿರ್ಮಾಪಕ ದಿಲ್ ರಾಜು, ತೆಲಂಗಾಣ ಸರ್ಕಾರದ ನಿಗಮವೊಂದರ ಅಧ್ಯಕ್ಷರಾಗಿದ್ದು, ಸಿಎಂ ಅವರನ್ನು ಟಿಕೆಟ್ ದರ ಹೆಚ್ಚಳದ ವಿಷಯದಲ್ಲಿ ಒಪ್ಪಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.