ಬಿಜೆಪಿ ಟಿಕೆಟ್ ವಂಚಿತ ಸಂಸದ ಡಿವಿ ಸದಾನಂದಗೌಡ ಮುಂದೇನು ಮಾಡ್ತಾರೆ? ಬಿಜೆಪಿ ತೊರೆಯುತ್ತಾರಾ? ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಮೂರು ದಿನಗಳಿಂದ ಕಾಯಿಸಿ ಕಾಯಿಸಿ ಇಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ, ತಮ್ಮ ನಗುಮುಖದ ಹಿಂದಿನ ನೋವನ್ನು ತೆರೆದಿಟ್ಟಿದ್ದಾರೆ. ಪಕ್ಷದ ಒಳಗೆ ಏನು ನಡೆಯುತ್ತಿದೆ ಎಂದು ಸವಿವರವಾಗಿ ವಿವರಿಸಿದ್ದಾರೆ. ತಮಗೆ ಮೋಸ ಮಾಡಿದ್ದು ಯಾರು ಎಂಬುದನ್ನು ಹೇಳದೆಯೇ ಹೇಳಿದ್ದಾರೆ. ಕಾಂಗ್ರೆಸ್ ಆಫರ್ ಇದ್ದರೂ ಬಿಜೆಪಿ ತೊರೆಯದಿರಲು ತೀರ್ಮಾನಿಸಿದ್ದಾರೆ. ಪಕ್ಷದ ಒಳಗೆ ಇದ್ದುಕೊಂಡು ಕರ್ನಾಟಕ ಬಿಜೆಪಿಯ ಶುದ್ದೀಕರಣಕ್ಕೆ ಪಣ ತೊಟ್ಟಿದ್ದಾರೆ.
ಕೆಎಸ್ ಈಶ್ವರಪ್ಪ ಶೈಲಿಯಲ್ಲಿಯೇ ರಾಜ್ಯ ಬಿಜೆಪಿಯಲ್ಲಿ ಮನೆ ಮಾಡಿರುವ ಪರಿವಾರ ರಾಜಕೀಯದ ವಿರುದ್ಧ ತೊಡೆ ತಟ್ಟಿದ್ದಾರೆ. ಎಲ್ಲಿಯೂ ನೇರವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಹೆಸರು ಪ್ರಸ್ತಾಪಿಸದೇ, ಪರೋಕ್ಷವಾಗಿ ಅವರ ವಿರುದ್ಧ ಸಮರ ಸಾರಿರುವುದು ಡಿವಿ ಸದಾನಂದಗೌಡರ ಪ್ರತಿ ಮಾತಿನಲ್ಲಿಯೂ ಕಂಡುಬಂತು.
ಡಿವಿ ಸದಾನಂದಗೌಡರ ಮೊನಚಿನ ಮಾತುಗಳು ಇಲ್ಲಿವೆ ನೋಡಿ
– ಇಂದು ರಾಜ್ಯ ಬಿಜೆಪಿಯ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ
– ನನ್ನ ಮಕ್ಕಳಿಗೆ, ನನ್ನ ಕುಟುಂಬದವರಿಗೆ, ನನ್ನ ಸಂಬಂಧಿಕರಿಗೆ, ನನ್ನ ಚೇಲಾಗಳಿಗೆ ಮಾತ್ರ ಇರುವಂತಹ ಪಕ್ಷ ಬಿಜೆಪಿ ಎಂದು ಭಾವಿಸಿದ್ದಾರೆ.
– ಇದು ಮೊದಲು ತಲಗಬೇಕು. ಹೀಗಾಗಿ ರಾಜ್ಯ ಬಿಜೆಪಿಯ ಶುದ್ದೀಕರಣಕ್ಕೆ ಪಣ ತೊಟ್ಟಿದ್ದೇನೆ. ಅಲ್ಲಿಯವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ.
– ನನಗೆ ಅಪಮಾನ ಮಾಡಿದವರು ಮುಂದೆ ಅನುಭವಿಸುತ್ತಾರೆ. ಇದು ಸತ್ಯ
– ಸಹಿಸಿಕೊಳ್ಳುವವರಿಗೆ ತಾಳ್ಮೆ ಇದ್ದರೇ, ನೋವು ಕೊಟ್ಟವರು ಇದ್ದೂ ಸತ್ತಂತೆ.
– ಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧಪಕ್ಷದ ನಾಯಕರು ಬದಲಾಗುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ ಎಂದರೇ ನೀವೇ ಅರ್ಥ ಮಾಡಿಕೊಳ್ಳಿ
– ನಾನು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರವಾಗಿ ಪ್ರಚಾರ ಮಾಡುತ್ತೇನೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದು ನಮ್ಮ ಗುರಿ