ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಒಡೆತನದ ಅಕ್ರಮ ಕಟ್ಟಡವೊಂದನ್ನ ಧ್ವಂಸ ಮಾಡಬೇಕೆಂದು ಸರ್ಕಾರವೇ ಆದೇಶ ಮಾಡಿರುವ ಅಚ್ಚರಿಯ ಬೆಳವಣಿಗೆ ನಡೆದಿದೆ.. ಮಾಜಿ ಶಾಸಕರಾದ ಭೀಮಾನಾಯ್ಕ್ ಅವರು ಯಾವುದೇ ನಕ್ಷೆ ಅನುಮೋದನೆ ಪಡೆಯದೆ ಕಾನೂನು ಉಲ್ಲಂಘಿಸಿ ಬಹುಕೋಟಿ ಮೌಲ್ಯದ 5 ಅಂತಸ್ತಿನ ವಾಣಿಜ್ಯ ಕಟ್ಟಡವನ್ನು ಕಟ್ಟಿದ್ದಾರೆ. ಈ ಸಂಬಂಧ ದೂರೊಂದು ದಾಖಲಾಗಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಬೇರೆ ದಾರಿ ಕಾಣದೆ ಕಟ್ಟಡ ಡೆಮಾಲಿಷನ್ಗೆ ಆದೇಶ ನೀಡಿದ್ದಾರೆ.. 2 ಬಾರಿ ಶಾಸಕರಾಗಿದ್ದ ಭೀಮಾನಾಯ್ಕ್ ಕಳೆದ ಬಾರಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರನ್ನು ಕೆಎಂಎಫ್ ಅಧ್ಯಕ್ಷರಾಗಿ 1 ವರ್ಷದ ಅವಧಿಗೆ ನೇಮಿಸಲಾಗಿತ್ತು. ಕೆಎಂಎಫ್ನಲ್ಲಿ ಈಗಾಗಲೇ 1 ವರ್ಷ ಪೂರೈಸಿರುವ ಭೀಮಾನಾಯ್ಕ್ ಇತ್ತೀಚೆಗೆ ಕೆಎಂಎಫ್ ಎಂಡಿ ಜೊತೆ ಸಂಘರ್ಷ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಶಾಸಕರಾಗಿ 10 ವರ್ಷ ಕೆಲಸ ಮಾಡಿ, ವಿವಿಧ ಸಮಿತಿಗಳಲ್ಲಿ ಕೆಲಸ ಮಾಡಿದ್ದರು. ಕನಿಷ್ಠ ಕಾನೂನಿನ ತಿಳುವಳಿಕೆ ಇಲ್ಲದೆ, ವಾಣಿಜ್ಯ ಕಟ್ಟಡ ಕಟ್ಟಿರುವ ಬಗ್ಗೆ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುನ್ಸಿಪಲ್ ಆಕ್ಟ್ ಪ್ರಕಾರ ಹಾಗೂ ಸುಪ್ರೀಂಕೋರ್ಟ್ನ ವಿವಿಧ ತೀರ್ಪುಗಳ ಅನ್ವಯ ಸದರಿ ವಿವಾದಿತ ಕಟ್ಟಡವನ್ನು ನೆಲಸಮ ಮಾಡದೆ ವಿಧಿಯಿಲ್ಲ ಎಂದು ಅಧಿಕಾರಿಗಳು ಫ್ರೀಡಂ ಟಿವಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.