ಬೆಳಗಾವಿ: ಮಕ್ಕಳ ಮಾರಾಟ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಮತ್ತೆ ಬೆಳಗಾವಿಯಲ್ಲಿ ಸದ್ದು ಮಾಡುತ್ತಿವೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರದ ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಮಗುವಿನ ಮಲತಂದೆ ಸುಲ್ತಾನಪುರದ ಸದಾಶಿವ ಶಿವಬಸಪ್ಪ ಮಗದುಮ್ಮ (32), ಪ್ರಸ್ತುತ ಸುಲ್ತಾನಪುರದಲ್ಲಿರುವ ಭಡ್ಗಾಂವ್ ಮೂಲದ ಲಕ್ಷ್ಮಿ ಬಾಬು ಗೋಲಬಾವಿ (38), ಅಂಬೇಡ್ಕರ್ ನಗರದಲ್ಲಿ ವಾಸವಿರುವ ಮಹಾರಾಷ್ಟ್ರದ ಕೊಲ್ಲಾಪುರದ ನಾಗಲಾ ಪಾರ್ಕ್ನ ಸಂಗೀತಾ ವಿಷ್ಣು ಸಾವಂತ್ (40) ಮತ್ತು ಕಾರವಾರದ ಹಳಿಯಾಳ ತಾಲೂಕಿನ ಕೆಸ್ರೋಲಿಯ ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ (50) ಎಂದು ಗುರುತಿಸಲಾಗಿದೆ.
ಶಿವಬಸಪ್ಪ ಮಗದುಮ್, ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಸೇರಿ ಬಾಲಕನನ್ನು ಬೆಳಗಾವಿ ನಗರದ ದಿಲಶಾದ್ ಸಿಕಂದರ್ ತಹಸೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ದಿಲ್ಶಾದ್ ಅವರಿಗೆ ಗಂಡು ಮಗು ಬೇಕಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಬಾಲಕನ ತಾಯಿ ಸಂಗೀತಾ ಗುಡಪ್ಪ ಕಮ್ಮಾರ್ ಅವರನ್ನು ಮಗದುಮ್ ವಿವಾಹವಾಗಿದ್ದರು. ಮಗದುಮ್ ಅವರಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದರು. ಅವರ ಮಕ್ಕಳು ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಇದರಿಂದ ಬೇಸತ್ತು ಮಗದುಮ್ ಹುಡುಗನನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ.
ಏತನ್ಮಧ್ಯೆ, ಬಾಲಕನ ತಾಯಿ ಸಂಗೀತಾ ಕಮ್ಮಾರ್ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಬೈಲಹೊಂಗಲ ಸಮೀಪದ ಗ್ರಾಮವೊಂದರಲ್ಲಿ ಬಾಲಕನನ್ನು ಪತ್ತೆ ಮಾಡಿದ್ದಾರೆ.