Bangalore :
ಡಕಾಯಿತಿ, ಕಳ್ಳತನ ಪ್ರಕರಣಗಳಲ್ಲಿ ಪೊಲೀಸರು ಶಾಮೀಲು, ರಿಯಲ್ ಎಸ್ಟೇಟ್ ದಂಧೆಯಲ್ಲಿ ಪೊಲೀಸರ ಪಾತ್ರ.. ಇಂಥ ಸುದ್ದಿಗಳನ್ನು ಕೇಳಿದ್ದೇವೆ ಆದರೆ ವೇಶ್ಯಾವಾಟಿಕೆ ದಂಧೆಯಲ್ಲಿ ಪೊಲೀಸರು ಶಾಮಿಲಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬೆಂಗಳೂರು ಅಷ್ಟೇ ಅಲ್ಲ ರಾಜ್ಯ ಹಾಗೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಶನಿವಾರ ತಡರಾತ್ರಿ ಕೆಆರ್ ಪುರ ಸಮೀಪದ ಟಿನ್ ಫ್ಯಾಕ್ಟರಿ ಬಳಿ ಇರುವ ನಿರ್ವಾಣ ಎಂಬ ಹೆಸರಿನ ಪಾರ್ಲರ್ ಮೇಲೆ ಸಿಸಿಬಿ ರೇಡ್ ನಡೀತು. ಈ ರೇಡ್ ವೇಳೆ ಪೊಲೀಸರೇ ಮಾಂಸ ದಂಧೆಯ ಬೆನ್ನೆಲುಬಾಗಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಕುರಿತ ಖಚಿತ ಮಾಹಿತಿ ಪಡೆದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಸಿಸಿಬಿಗೆ ಸೂಚನೆ ನೀಡಿ ರೆಡ್ ನಡೆಸಿದ್ದಾರೆ. ಹೊರ ರಾಜ್ಯಗಳಿಂದ ಯುವತಿಯರನ್ನು ಕರೆಸಿ ಪ್ರಭಾವಿ ಗಿರಾಕಿಗಳಿಗೆ ಸಪ್ಲೈ ಮಾಡಲಾಗುತ್ತಿತ್ತು. ಪ್ರತಿಯೊಬ್ಬ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಲಾಗುತ್ತಿತ್ತು. ಸದರಿ ನಿರ್ವಾಣ ಪಾರ್ಲರ್ ಅನ್ನು ಲೇಡಿ ಎಸಿಪಿ ಒಬ್ಬರ ಪತಿ ನಡೆಸುತ್ತಿದ್ದ ಎನ್ನಲಾಗಿದೆ. ಆ ಮೂಲಕ ಪರೋಕ್ಷವಾಗಿ ಈ ಹೈಟೆಕ್ ವೇಶ್ಯಾವಾಟಿಕೆ ದಂಧೆದಗೆ ಪೊಲೀಸರೇ ಕಾವಲಿಗಿದ್ದರು ಎನ್ನುವ ಆಘಾತಕಾರಿ ಅಂಶ ರಾಜಧಾನಿ ಜನರನ್ನು ಬೆಚ್ಚಿ ಬೀಳಿಸಿದೆ.
ಇನ್ನು ಈ ಪಾರ್ಲರ್ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ. ಠಾಣೆಯ ಕೂಗಳತೆ ದೂರದಲ್ಲಿದ್ದರೂ ಈ ದಂಧೆಯ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆಗೂ ಕಾರಣವಾಗಿದೆ.
ಜೊತೆಗೆ ಇನ್ನೂ ಹಲವು ಪೊಲೀಸ್ ಅಧಿಕಾರಿಗಳು ಈ ದಂಧೆಯ ಪಾಲುದಾರರಾಗಿದ್ದರು ಎಂಬ ಸ್ಪೋಟಕ ಮಾಹಿತಿ ಹರಿದಾಡುತ್ತಿದೆ. ಕಮೀಷನರ್ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.