#Exclusive NewsTop News

ಬಾಗಲಕೋಟೆ ಕ್ಷೀರ ಭಾಗ್ಯ ಹಗರಣ: 127 ಮುಖ್ಯೋಪಾಧ್ಯಾಯರಿಗೆ ನೋಟಿಸ್

ಬಾಗಲಕೋಟೆ ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 18 ಲಕ್ಷ ರೂಪಾಯಿ ಮೌಲ್ಯದ ಹಾಲಿನ ಪುಡಿ, ರಾಗಿ ಹಿಟ್ಟು ಮತ್ತು ಎಣ್ಣೆಯನ್ನು ಜಪ್ತಿ ಮಾಡಲಾಗಿದೆ. 127 ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದ್ದು, ಈ ಅಕ್ರಮದಲ್ಲಿ ಶಿಕ್ಷಕರ ಪಾತ್ರವೂ ಇದೆ ಎಂಬ ಅನುಮಾನವಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶ ಉಂಟಾಗಿದೆ.

ಬಾಗಲಕೋಟೆ, ಡಿಸೆಂಬರ್​ 03: ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ ಕ್ಷೀರ ಭಾಗ್ಯ (Ksheera Bhagya) ಯೋಜನೆಯ ಹಾಲಿನ ಪುಡಿಗೆ ಕನ್ನ ಹಾಕುವ ದಂದೆ ಮೊದಲಿಂದಲೂ ನಡೆಯುತ್ತಿತ್ತು. ಆಗಾಗ ಪೊಲೀಸರು ಸಣ್ಣ ಪುಟ್ಟ ದಾಳಿ ಮಾಡುವುದು ವಾಪಸ್ ಬಿಟ್ಟು ಕಳಿಸುವುದು ನಡೆಯುತ್ತಲೇ ಇತ್ತು. ಆದರೆ ಕಳೆದ ಅಕ್ಟೋಬರ್ 5ರಂದು ಪೊಲೀಸರು ಭರ್ಜರಿ ದಾಳಿ ನಡೆಸಿ ಟನ್ ಗಟ್ಟಲೆ ಹಾಲಿನ ಪ್ಯಾಕೆಜ್‌ ಜಪ್ತಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 127 ಜನ ಮುಖ್ಯಶಿಕ್ಷಕರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ.

ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳಿಗೆ ಪೌಷ್ಟಿಕತೆ ಹೆಚ್ಚಿಸಲು ಸರ್ಕಾರ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಹಾಲು ನೀಡಲಾಗುತ್ತೆ. ಸರ್ಕಾರದ ಮಹತ್ವ ಪೂರ್ಣ ಯೋಜನೆಗೂ ಕನ್ನ ಹಾಕಲಾಗುತ್ತಿದೆ‌.

ಖದೀಮರು ಕಾಳ ಸಂತೆಯಲ್ಲಿ ಹಾಲಿನ ಪೌಡರ್ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ಕಳೆದ ಅಕ್ಟೋಬರ್ 5 ರಂದು ಬಾದಾಮಿ ತಾಲ್ಲೂಕಿನ ಸೂಳಿಕೇರಿ ಗ್ರಾಮದಲ್ಲಿ ಭರ್ಜರಿ ದಾಳಿ ನಡೆದಿತ್ತು. ಶೆಡ್ನಲ್ಲಿ ಸಂಗ್ರಹ ಮಾಡಿ ಇಟ್ಟಿದ್ದ ಒಟ್ಟು 18.14 ಲಕ್ಷ ರೂ. ಮೌಲ್ಯದ ಹಾಲಿನ ಪುಡಿ ಪ್ಯಾಕೆಟ್, ರಾಗಿ ಹಿಟ್ಟು, ಅಡುಗೆ ಎಣ್ಣೆ ಪಾಕೇಟ್ ಜಪ್ತಿ ಮಾಡಲಾಗಿತ್ತು‌.

ದಾಳಿ ವೇಳೆ ಆರೋಪಿ ಸಿದ್ದಪ್ಪ ಎಂಬಾತನನ್ನು ಬಂಧಿಸಲಾಗಿತ್ತು‌. ವಿಚಾರಣೆಯಲ್ಲಿ ಸಿದ್ದಪ್ಪ ತಾನು ಯಾವ ಯಾವ ಸರಕಾರಿ ಶಾಲೆಯಿಂದ ಹಾಲಿನ ಪ್ಯಾಕೆಟ್ ಪಡೆದಿದ್ದೆ ಎಂದು ಬಾಯಿ ಬಿಟ್ಟಿದ್ದಾನೆ‌. ಆತನ ಹೇಳಿಕೆ ಮೇರೆಗೆ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಹುನಗುಂದ ಬಾದಾಮಿ, ಬಾಗಲಕೋಟೆ ಮೂರು ತಾಲೂಕಿನ ಸರಕಾರಿ ಶಾಲೆಗಳು 127ಕ್ಕೂ ಅಧಿಕ ಮುಖ್ಯ ಶಿಕ್ಷಕರಿಗೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೊಟೀಸ್ ನೀಡಿದ್ದಾರೆ. ಈ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಹಾಲಿನ ಕಳ್ಳದಂದೆಯಲ್ಲಿ ಶಾಮೀಲಾದರಾ ಎಂಬ ಸಂಶಯ ಶುರುವಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪೌಡರ್​ ಅನ್ನು ಶಾಲೆಗೆ ಸರಬರಾಜು ಮಾಡಲು ಟೆಂಡರ್‌ ಪಡೆದ ಶ್ರೀಶೈಲ್ ಅಂಗಡಿ ಈ ಅಕ್ರಮ ದಂದೆ ಮಾಡುತ್ತಿರುವುದು ಬಯಲಾಗಿದೆ. ಅಕ್ರಮ ದಂದೆಯ ಮಾಹಿತಿ ತಿಳಿದ ಸಿಇಎನ್ ಪೊಲೀಸರು ಕಳೆದ ತಿಂಗಳು ಸೂಳಿಕೆರಿ ಗ್ರಾಮದಲ್ಲಿ ದಾಳಿ ನಡೆಸಿದ್ದರು‌. ಹಾಲಿನ ಪುಡಿ ಪ್ಯಾಕೆಟ್ ಜೊತೆಗೆ ರಾಗಿಹಿಟ್ಟು, ಅಡುಗೆ ಎಣ್ಣೆ ಕೂಡ ಜಪ್ತಿ ಮಾಡಿದ್ದರು.

ಸಿದ್ದಪ್ಪ ಕಿತ್ತಲಿ, ಶ್ರೀಶೈಲ್ ಅಂಗಡಿ ಕೆಳಗೆ ಉಪಗುತ್ತಿಗೆದಾರನಾಗಿದ್ದನು. ಅಕ್ರಮವಾಗಿ ಈ ದಾಸ್ತಾನನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಶ್ರೀಶೈಲ ಅಂಗಡಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಆರೋಪಿ ಸಿದ್ದಪ್ಪ ಕಿತ್ತಲಿ 4475 ಕೆಜಿ ಹಾಲಿನ ಪುಡಿ ಪಾಕೇಟ್, 325 ಕೆಜಿ ರಾಗಿ ಹಿಟ್ಟು, 50 ಕೆಜಿ ಅಡುಗೆ ಎಣ್ಣೆ ಪಾಕೇಟ್ ಗಳನ್ನು ಸಂಗ್ರಹ ಮಾಡಿ, ಒಂದು ಬೊಲೆರೋ ವಾಹನದಲ್ಲಿ ಮಹಾರಾಷ್ಟ್ರಕ್ಕೆ ಸಾಗಿಸ್ತಿದ್ದ. ಸದ್ಯ 127ಕ್ಕೂ ಅಧಿಕ ಶಿಕ್ಷಕರಿಗೆ ನೊಟೀಸ್ ನೀಡಿದ ಪೈಕಿ ಕೇವಲ 27 ಜನ ಮುಖ್ಯಶಿಕ್ಷಕರು ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ. ಮಕ್ಕಳ ಹಾಲಿಗೆ ಕನ್ನ ಹಾಕಿದ ಪ್ರಕರಣ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಶಿಕ್ಷಕರ ಪಾತ್ರವಿಲ್ಲದೆ ನಡೆಯೋಕೆ ಸಾಧ್ಯವೇ ಇಲ್ಲ. ಕೇವಲ ನೊಟೀಸ್​ ಕೊಟ್ಟರೆ ಸಾಲದು ಅವರ ಮೇಲೆ ಕಠಿಣ ಕ್ರಮ ಆಗಬೇಕು ಅಂತಿದ್ದಾರೆ.

Comments (0)

Your email address will not be published. Required fields are marked *

Back to top button