ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ನಿತ್ಯ ಲಕ್ಷಾಂತರ ಜನ ಆಟೋ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ನಗರದಲ್ಲಿ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ ಎನ್ನುವ ದೊಡ್ಡಮಟ್ಟದ ಆಕ್ರೋಶವಿದೆ.
ಆಟೋ ಹತ್ತಿದರೆ ಸಾಕು 100 ರೂಪಾಯಿ ಮಿನಿಮಮ್ ಚಾರ್ಚ್ ಎಂಬಂತೆ ಆಟೋ ಚಾಲಕರು ವರ್ತಿಸುತ್ತಾರೆ. ಮಾತ್ರವಲ್ಲ, ಆಟೋ ಚಾಲಕರು ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಜೊತೆಗೆ ದರದ ವಿಚಾರವಾಗಿ ಕಿರಿಕ್ ಮಾಡಿರುವಂತಹ ಹಲವು ನಿದರ್ಶನಗಳು ನಮ್ಮ ಮುಂದಿವೆ.
ಈ ನಡುವೆ ದುಪ್ಪಟ್ಟು ಹಣ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವೇ ಸೂಚನೆ ನೀಡಿದ್ದಾರೆ.
ಪ್ರಯಾಣಿಕರ ಬಳಿ ನಿಗದಿಗಿಂತಲೂ ಹೆಚ್ಚು ದರ ಬೇಡಿಕೆ ಮಾಡಲಾಗುತ್ತಿದೆ. ಇಂತಹ ಪ್ರಕರಣದ ಬಗ್ಗೆ ದೂರು ಬಂದಲ್ಲಿ ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಅಂತಹ ಚಾಲಕರ ಪರ್ಮಿಟ್ ರದ್ದು ಮಾಡಬೇಕು. ಮಾತ್ರವಲ್ಲ, ಕೇಸ್ ಕೂಡ ದಾಖಲಿಸಬೇಕು ಎಂದು ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. .
ಸಾರ್ವಜನಿಕರಿಂದ ಆಟೋ ಚಾಲಕರ ಮೇಲೆ ಸಾಲು ಸಾಲು ದೂರುಗಳು ಬಂದ ಬೆನ್ನಲ್ಲೇ ಕ್ರಮಕ್ಕೆ ಸೂಚನೆ ನೀಡಲಾಗಿದೆ