Top Newsರಾಜಕೀಯಸುದ್ದಿ

ಅಮೃತಸರ: ಪಂಜಾಬ್‌ ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಹತ್ಯೆಗೆ ಯತ್ನ! ವಿಡಿಯೋ ಇಲ್ಲಿದೆ

ಅಮೃತಸರ: ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರನ್ನು ಇಂದು ಬುಧವಾರ ಅಮೃತಸರದ ಸ್ವರ್ಣ ಮಂದಿರದ ಹೊರಗೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಗೈಯಲು ಯತ್ನಿಸಿದ ಘಟನೆ ನಡೆದಿದೆ.

ಸುಖ್ ಬೀರ್ ಸಿಂಗ್ ಬಾದಲ್ ಮತ್ತು ಇತರ ಎಸ್‌ಎಡಿ ನಾಯಕರು ಮೊನ್ನೆ ಸೋಮವಾರ ಅಕಾಲ್ ತಖ್ತ್ ಘೋಷಿಸಿದ ‘ತಂಖಾ’ ಅಡಿಯಲ್ಲಿ ‘ಸೇವಾದಾರ’ರಾಗಿ ಸೇವೆ ಸಲ್ಲಿಸುತ್ತಿರುವಾಗ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಗಾಲಿಕುರ್ಚಿಯಲ್ಲಿ ಕುಳಿತು ‘ಸೇವೆ’ ನಡೆಸುತ್ತಿದ್ದ ಬಾದಲ್ ಅವರು ಕುಳಿತಿದ್ದ ಹತ್ತಿರದ ಗೋಡೆಗೆ ಗುಂಡು ಅಪ್ಪಳಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರೋಪಿಯನ್ನು ಅಮೃತಸರದಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಗುರುದಾಸ್‌ಪುರ ಜಿಲ್ಲೆಯ ದಾಲ್ ಖಾಲ್ಸಾದ ನರೇನ್ ಸಿಂಗ್ ಚೋರ್ಹಾ ಎಂದು ಗುರುತಿಸಲಾಗಿದ್ದು, ಗುಂಡು ಹಾರಿಸಿದಾಗ ಅಲ್ಲಿನ ಜನರು ಆತನ ಮೇಲೆ ಹಲ್ಲೆ ನಡೆಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾದಲ್ ಅವರು 2007 ರಿಂದ 2017 ರವರೆಗೆ ಪಂಜಾಬ್‌ನ ಉಪಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆದ್ದರಿಂದ ಬಾದಲ್ ಅವರಿಗೆ ಹಾಗೂ ಅಕಾಲಿದಳದ ಇನ್ನಿತರ ನಾಯಕರಿಗೆ `ತಂಖಾ’ (ಧಾರ್ಮಿಕ ಶಿಕ್ಷೆ) ಘೋಷಿಸಲಾಗಿತ್ತು. `ಸೇವಾದರ್’ ಅಡಿಯಲ್ಲಿ ಪಾತ್ರೆ ತೊಳೆಯಲು, ಬೂಟು ಸ್ವಚ್ಛಗೊಳಿಸಲು ತಿಳಿಸಲಾಗಿತ್ತು. ನಿನ್ನೆ (ಡಿ.03) ಗೋಲ್ಡನ್ ಟೆಂಪಲ್‌ನಲ್ಲಿ ತಪಸ್ಸನ್ನು ಆರಂಭಿಸಿದ್ದರು.

ಕಳೆದ ಎರಡು ದಿನಗಳಿಂದ ಬಾದಲ್ ಒಂದು ಕೈಯಲ್ಲಿ ಈಟಿ ಹಿಡಿದು, ನೀಲಿ `ಸೇವಾದರ್’ ಸಮವಸ್ತ್ರವನ್ನು ಧರಿಸಿ ಗೋಲ್ಡನ್ ಟೆಂಪಲ್‌ನ ಗೇಟ್ ಬಳಿ ವ್ಹೀಲ್ ಚೇರ್‌ನಲ್ಲಿ ಕುಳಿತಿದ್ದರು.

ಸಿಸಿಟಿವಿ ದೃಶ್ಯಗಳಲ್ಲಿ ದಾಳಿಕೋರ ನಿಧಾನವಾಗಿ ಗೇಟ್ ಬಳಿ ಬಂದು ಬಂದೂಕನ್ನು ಹೊರತೆಗೆಯುತ್ತಾನೆ. ಬಳಿಕ ಗುಂಡಿನ ದಾಳಿ ನಡೆಸಿರುವುದು ಸೆರೆಯಾಗಿದೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನರೇನ್ ಸಿಂಗ್ ಖಲಿಸ್ತಾನಿ ಭಯೋತ್ಪಾದಕರ ಗುಂಪು ಬಬ್ಬರ್ ಖಾಲ್ಸಾ ಜೊತೆ ಸಂಪರ್ಕ ಹೊಂದಿದ್ದಾನೆ. 2004ರಲ್ಲಿ 94 ಅಡಿ ಸುರಂಗವನ್ನು ಅಗೆದು ಜೈಲಿನಿಂದ ತಪ್ಪಿಸಿಕೊಂಡಿದ್ದ ಬುರೈಲ್ ಜೈಲ್ ಬ್ರೇಕ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಬಬ್ಬರ್ ಖಾಲ್ಸಾ ಜೊತೆ ಸಂಬಂಧವಿದೆ ಎಂದು ಮೂಲಗಳು ತಿಳಿಸಿವೆ.

ಯಾರಿದು ಸುಖಬೀರ್ ಸಿಂಗ್ ಬಾದಲ್?

ಸುಖ್ಬೀರ್ ಸಿಂಗ್ (62 ವರ್ಷ) ಬಾದಲ್ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ. ಸಿಖ್ ಧರ್ಮ ಗ್ರಂಥ ಗುರು ಗ್ರಂಥ ಸಾಹೀಬ್‌ ಅನ್ನು ಅವಮಾನಿಸಿದ್ದ ವಿವಾದಿತ ಸಂತ ರಾಮ್ ರಹೀಂಗೆ ಕ್ಷಮೆ ನೀಡಿದ್ದ ಕಾರಣಕ್ಕೆ ಸಿಖ್ ಧಾರ್ಮಿಕ ಮಂಡಳಿ ಅಕಾಲ್ ತಖ್ತ್‌ನಿಂದ ಬಾದಲ್‌ ಶಿಕ್ಷೆಗೊಳಗಾಗಿದ್ದರು. ಅಮೃತ್‌ಸರದ ಗೋಲ್ಡನ್‌ ಟೆಂಪಲ್ ಅವರಣದಲ್ಲಿ ಈ ಶಿಕ್ಷೆಯನ್ನು ಅನುಭವಿಸುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿಗೆ ಪ್ರಯತ್ನಿಸಲಾಗಿದೆ. ಭದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಶಿರೋಮಣಿ ಅಕಾಲಿ ದಳ ಆರೋಪಿಸಿದೆ.

Comments (0)

Your email address will not be published. Required fields are marked *

Back to top button