ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಇದೆ. ಈ ಆತಂಕದಲ್ಲೇ ಇಡೀ ದೇಶದ ಜನ ಕಾಲಕಳೆಯುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನ ಪ್ರತಿಷ್ಠಿತ ಪಬ್ ಒಂದಕ್ಕೆ ಶಂಕಿತ ಭಯೋತ್ಪಾದಕ ನುಗ್ಗಿದ್ದಾನೆ ಎಂಬ ಸದ್ದು ಬೆಳ್ಳಂಬೆಳಿಗ್ಗೆ ಕೇಳಿಬಂದಿತ್ತು.. ಆ ಶಂಕಿತ ಭಯೋತ್ಪಾದಕನ ಸೆರೆಗೆ ಅರೆಸೇನಾ ಪಡೆಯೇ ಧಾವಿಸಿತ್ತು.
ರಾಜಾಜಿನಗರದ ಒರಾಯನ್ ಮಾಲ್ ಸಮೀಪವಿರುವ ಜಾಮಿಟ್ರಿ ಪಬ್ ಒಳಗೆ ಭಯೋತ್ಪಾದಕ ಅವಿತುಕೊಂಡಿದ್ದಾನೆ ಎಂದು 112ಗೆ ಫೋನ್ ಕಾಲ್ ಒಂದು ಬಂದಿತ್ತು.. ಈ ಕರೆ ಇಡೀ ಬೆಂಗಳೂರು ಪೊಲೀಸರ ನಿದ್ದೆಗೆಡಿಸಿತ್ತು. ಯಾರೋ ಆತಂಕವಾದಿಯೇ ಗನ್ ಹಿಡಿದು ಪಬ್ ಒಳಕ್ಕೆ ನುಗ್ಗಿದ್ದಾನೆ ಎಂದು ಪೊಲೀಸರು ಶಸ್ತ್ರಾಸ್ತ್ರ ಸಮೇತ ಸ್ಥಳಕ್ಕೆ ಓಡಿಬಂದಿದ್ರು. ಪೊಲೀಸರು ಹುಡುಕಿದ್ರೂ ಆ ಆತಂಕವಾದಿ ಕಾಣಿಸಲಿಲ್ಲ. ಕಡೆಗೆ ಅರೆಸೇನಾಪಡೆ ಕೂಡ ಜಾಮಿಟ್ರಿ ಪಬ್ ಕಡೆಗೆ ಶಸ್ತ್ರಾಸ್ತ್ರ ಹಿಡಿದು ಧಾವಿಸಿತ್ತು. ಪೊಲೀಸರು, ಅರೆಸೇನಾ ಪಡೆ ಅಲ್ಲಿ ಹುಡುಕಿದರೂ ಯಾರೊಬ್ಬ ಆತಂಕವಾಡಿ ಸಿಗಲೇ ಇಲ್ಲ..
ಡಾಗ್ ಸ್ಕ್ವಾಡ್ , ಬಾಂಬ್ ಸ್ಕ್ವಾಡ್ , 3 KSRP ತುಕಡಿಗಳನ್ನ ಹಾಕಿ ಪಬ್ ಮುಂದಿನ ರಸ್ತೆ ಬಂದ್ ಮಾಡಿ ಡ್ರೋನ್ ಬಳಸಿ ಪೊಲೀಸರು ಕಾರ್ಯಚರಣೆ ಮಾಡಿದರು ಅನುಮಾನಸ್ಪದ ವ್ಯಕ್ತಿ ಬಗ್ಗೆ ಸುಳಿವು ಪತ್ತೆ ಆಗಲೇ ಇಲ್ಲ. ನಾಲ್ಕು ಅಂತಸ್ತಿನ ಕಟ್ಟಡ ಜಾಲಾಡಿದ್ರೂ ಶಂಕಿತನ ಸುಳಿವು ಸಿಗದ ಕಾರಣ ಆತ ಅಲ್ಲಿಂದ ಎಸ್ಕೇಪಾಗಿದ್ದಾನೆ ಎಂದು ಪೊಲೀಸರು ತೀರ್ಮಾನಕ್ಕೆ ಬರ್ತಾರೆ.
ಬಳಿಕ ಡಿ ಸ್ಕ್ವಾಟ್ ತಂಡದೊಂದಿಗೆ ಘಟನ ಸ್ಥಳ ಪರಿಶೀಲನೆ ಮಾಡಿದಾಗ ಕಳ್ಳತನ ಮಾಡಿರೋದು ಪತ್ತೆ ಆಗುತ್ತೆ. ಮುಂಜಾನೆ ಮೂರು ಗಂಟೆ ಜಾಮೀಟ್ರಿ ಪಬ್ ಡೋರ್ ಬ್ರೇಕ್ ಮಾಡಿ ಕಳ್ಳ ಒಳಗಡೆ ಹೋಗಿದ್ದಾನೆ. ಮುಖಕ್ಕೆ, ಕೈಗೆ ಮಾಸ್ಕ್ ಧರಿಸಿಕೊಂಡು ಬ್ಲಾಕ್ ಡ್ರೆಸ್ ನಲ್ಲಿ ಒಳಗಡೆ ಎಂಟ್ರಿಯಾಗಿದ್ದಾನೆ. ಒಳಗಡೆ ಹೋದವನೇ ಸಿಸಿಟಿವಿಗಳನ್ನ ಆಫ್ ಮಾಡಿರೋ ವಿಚಾರ ತಿಳಿದುಬಂದಿದೆ. ಆದ್ರೆ ಆತ ಭಯೋತ್ಪಾದಕ ಅಲ್ಲ ಕಳ್ಳ ಅನ್ನೋದು ಗೊತ್ತಾದ ಕೂಡಲೆ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಆ ಕಳ್ಳ ಯಾರು, ಎಲ್ಲಿಗೆ ಹೋದ ಎಂದು ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ..