ಬೆಂಗಳೂರು ದಕ್ಷಿಣ ಎಸಿ ಕಚೇರಿ ವ್ಯಾಪ್ತಿಯಲ್ಲಿ ಭಾರಿ ಭೂ ಭ್ರಷ್ಟಾಚಾರ ನಡೆದಿದೆ.. ಸ್ವಾಮೀಜಿ ಸೋಗು ಧರಿಸಿದ ಬ್ರೋಕರ್ ಒಬ್ಬನೇ ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಭೂ ಅಕ್ರಮವೆಸಗಿರುವ ಆರೋಪ ಕೇಳಿಬಂದಿದೆ. ಮಾಗಡಿಯ ನೇತೆನಹಳ್ಳಿಯಲ್ಲಿ ಚೌಡೇಶ್ವರಿ ಆಶ್ರಮ ಕಟ್ಟಿಕೊಂಡಿರುವ ಆಂಜನಪ್ಪ ಅಲಿಯಾಸ್ ಅಂಜನ್ ಗುರೂಜಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಗೋಮಾಳದ ಜಮೀನುಗಳನ್ನ ಎಸಿ, ತಹಶಿಲ್ದಾರ್ ಕಚೇರಿ ಸಿಬ್ಬಂದಿಗಳ ಸಹಾಯದೊಂದಿಗೆ ಖಾಸಗಿಯವರಿಗೆ ರಿಜಿಸ್ಟ್ರೇಷನ್ ಮಾಡಿಸೋ ಕೆಲಸ ಮಾಡ್ತಿದ್ದಾರೆ ಎನ್ನೋ ಆರೋಪ ಕೇಳಿಬಂದಿದೆ…
45 ಲಕ್ಷ ಕೊಟ್ಟರೆ, 1 ಎಕರೆ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಡ್ತೀನಿ ಅಂತ ಜನರನ್ನ ವಂಚಿಸುತ್ತಿದ್ದುದು ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೂ ದಾಖಲೆಗಳನ್ನ ನಕಲು ಮಾಡಿ ಅವನ್ನು ಸಂಬಂಧ ಪಟ್ಟ ಇಲಾಖೆಯ ರೆಕಾರ್ಡ್ ರೂಂನಲ್ಲಿ ಇಡಿಸುತ್ತೀನಿ, ಇವಕ್ಕೆ ಇಂತಿಷ್ಟು ಹಣ ಬೇಕು ಅಂತ ಡಿಮ್ಯಾಂಡ್ ಮಾಡಿರುವುದು ಕೂಡ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಗಡಿ ಮಾತ್ರವಲ್ಲದೆ ನೆಲಮಂಗಲ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಗೋಮಾಳ ಜಮೀನನ್ನು ಖಾಸಗಿಯವರಿಗೆ ಮಾಡಿಸಿಕೊಡ್ತೀನಿ ಎಂದು ಈ ವೇಳೆ ಹೇಳಿದ್ದಾರೆ.
ಭೂ ಪರಭಾರೆಗೆ 45 ಲಕ್ಷ ಖರ್ಚಾಗುತ್ತೆ ಎಂದಿದ್ದು, ಇದನ್ನ ರೆಡಿ ಮಾಡಲು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಶ್ರೀನಿವಾಸ್ 35 ಲಕ್ಷ ಕೇಳ್ತಾರೆ, ಬೆಂಗಳೂರು ದಕ್ಷಿಣ ಸ್ಪೆಷಲ್ ಡಿಸಿ 20 ಲಕ್ಷ ಲಂಚ ಕೇಳ್ತಾರೆ ಎಂದಿದ್ದಾರೆ. ಹಾಗೆಯೇ ಬೆಂಗಳೂರು ದಕ್ಷಿಣ ಎಸಿ ಒಂದು ರೂಪಾಯಿ ಕಡಿಮೆ ಆದರೂ ಫೈಲ್ ಮುಟ್ಟಲ್ಲ ಎಂದು ಕೂಡ ಅಂಜನ್ ಗುರೂಜಿ ವಿಡಿಯೋದಲ್ಲಿ ಹೇಳಿದ್ದಾನೆ. ಅಧಿಕಾರಿಗಳಿಗೆ 30-40 ಲಕ್ಷ ಲಂಚ ಕೊಡುವ ಬದಲು ಕೇಸ್ ವರ್ಕರ್ ಶೇಷಗಿರಿ ಎಂಬಾತನ ಬಳಿ ಇನ್ನೊಂದಿಷ್ಟು ಕಡಿಮೆ ಹಣಕ್ಕೆ ಡೀಲ್ ಮುಗಿಸಿಕೊಡ್ತೀನಿ ಅಂತಲೂ ಮಾಗಡಿಯ ಅಂಜನ್ ಗುರೂಜಿ ಹೇಳಿಕೊಂಡಿದ್ದಾನೆ..
ಅಂಜನಪ್ಪ ಅಲಿಯಾಸ್ ಅಂಜನ್ ಗುರೂಜಿ ಈ ಅಕ್ರಮಗಳನ್ನ ಮರೆಮಾಚಲು ನೇತನಹಳ್ಳಿಯಲ್ಲಿ ಚೌಡೇಶ್ವರಿ ಆಶ್ರಮ ಕಟ್ಟಿಕೊಂಡಿದ್ದು ಭಕ್ತರನ್ನೂ ವಂಚಿಸುತ್ತಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ..
ಅಂಜನ್ ಗುರೂಜಿಯೇ ಗ್ರಾಹಕನೊಬ್ಬನ ಬಳಿ ಹೇಳಿಕೊಂಡಂತೆ ಭೂ ಅಕ್ರಮದಲ್ಲಿ ಪಾಲ್ಗೊಂಡಿದ್ದು, ಅವರ ಹಿಂದೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವುದು ಕೂಡ ಮೇಲ್ನೋಟಕ್ಕೆ ಕಂಡುಬಂದಿದೆ. ಬೆಂಗಳೂರು ದಕ್ಷಿಣದಲ್ಲಿ ನಡೆಯುತ್ತಿರುವ ಈ ಭೂ ಅಕ್ರಮದ ಬಗ್ಗೆ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡರು ಎಚ್ಚೆತ್ತುಕೊಳ್ಳಬೇಕಿದೆ. ಅಲ್ಲದೇ ಅಕ್ರಮದಲ್ಲಿ ತೊಡಗಿರೋ ಬ್ರೋಕರ್ ಅಂಜನ್ ಗುರೂಜಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅಕ್ರಮದಲ್ಲಿ ಭಾಗಿಯಾಗಿರೋ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ಭೂಗಳ್ಳರನ್ನ ಮಟ್ಟ ಹಾಕಬೇಕಿದೆ.
ಅಂದಹಾಗೆ ಮಾಗಡಿ ತಾಲೂಕು ಒಂದರಲ್ಲೇ ಬರೋಬ್ಬರಿ 109 ಅಕ್ರಮ ಗೋಮಾಳ ಜಮೀನು ಪರಭಾರೆ ಪ್ರಕರಣ ಬೆಳಕಿಗೆ ಬಂದಿದ್ದು ಎಫ್ಐಆರ್ ದಾಖಲಾಗಿದೆ.