ವಿಜಯಪುರ: ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಉಚ್ಚಾಟನೆ ಬಳಿಕ ಅವರು ಮೊದಲ ಸಲ ವಿಜಯಪುರ ನಗರಕ್ಕೆ ಬಂದಿದ್ದು, ಯುಗಾದಿ ಹಬ್ಬದ ಪ್ರಯುಕ್ತ ಹೋಮ, ಹವನದಲ್ಲಿ ಪಾಲ್ಗೊಂಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗಲ್ಲ. ಆದ್ದರಿಂದ ಹಿಂದೂಗಳ ರಕ್ಷಣೆಗೆ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಬಂದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಿ.ಎಸ್,ಯುಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿರುವ ಯತ್ನಾಳ್ ಉಚ್ಚಾಟನೆಯನ್ನು ಸವಾಲನ್ನಾಗಿ ಸ್ವೀಕರಿಸಿ ಹೊಸ ಪಕ್ಷ ಸ್ಥಾಪನೆ ಮಾಡೋದಾಗಿ ಗುಡುಗಿದ್ದಾರೆ.
ಜನರ ಅಭಿಪ್ರಾಯ ಸಂಗ್ರಹಿಸಿ ಒಂದು ಹಿಂದೂ ಪಕ್ಷ ಆಸ್ತಿತ್ವ ತರಬೇಕಾಗುತ್ತೆ. ಬಹಳಷ್ಟು ಜನರು ಬಿಜೆಪಿಯಿಂದ ಹಿಂದೂ ರಕ್ಷಣೆ ಮಾಡುತ್ತಿಲ್ಲವೆಂದು ಆಳಲು ತೋಡಿಕೊಂಡಿದ್ದಾರೆ. ಹಲವು ಹಿಂದೂ ಕಾರ್ಯಕರ್ತರು ಸಾವನಪ್ಪಿದ್ದರು ಎನ್ಕೌಂಟರ್ ಮಾಡುವಂತಹ ದಿಟ್ಟ ಕ್ರಮ ಕೈಗೊಂಡಿಲ್ಲ. ಇವರ ಕುಟುಂಬ ಹೊಂದಾಣಿಕೆ ರಾಜಕೀಯ ಮಾಡಿ ಪಕ್ಷವನ್ನ ದುರ್ಬಲ ಮಾಡಿದ್ದಾರೆ. ಹಿಂದೂಗಳ ರಕ್ಷಣೆ, ದೇಶಕ್ಕಾಗಿ ಹಿಂದೂ ಪಕ್ಷ ಆಸ್ವಿತ್ವ ತರಬೇಕಾಗಿದೆ. ನಾವು, ಬಿಜೆಪಿ-ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಲ್ಲ. ಆದ್ರೆ ಇದೇ ಕಟುಂಬದ ಮೇಲೆ ವರಿಷ್ಟರು ನಿರ್ಭಲವಾದರೆ ನಮ್ಮ ದಾರಿ ನಾವು ಕಂಡುಕೊಳ್ಳಬೇಕಾಗುತ್ತೆ. ಹಿಂದೂ ಪಕ್ಷ ಕಟ್ಟುವ ಬಗ್ಗೆ ಬೀದರ್ ನಿಂದ ಹಿಡಿದು ಚಾಮರಾಜವರೆಗೂ ಒತ್ತಾಯಿಸಿದ್ದಾರೆ. ಹೊಸ ಪಕ್ಷದ ಬಗ್ಗೆ ನಾವು ಜನಾಭಿಪ್ರಾಯ ಸಂಗ್ರಹಿಸುತ್ತೇವೆ. ಒಂದು ವೇಳೆ ಹೊಸ ಪಕ್ಷದ ಪರವಾಗಿ ಅಭಿಪ್ರಾಯ ಬಂದ್ರೆ ಖಂಡಿತ ನಾವು ಹೊಸ ಪಕ್ಷವನ್ನ ವಿಜಯದಶಮಿ ವೇಳೆಗೆ ರಚನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.