ರಾಜಕೀಯರಾಜ್ಯ

ಕೆ.ಜೆ. ಜಾರ್ಜ್ ರಾಜೀನಾಮೆ ಸುಳ್ಳು ಸುದ್ದಿ – ಪರಮೇಶ್ವರ್ ಸ್ಪಷ್ಟನೆ

ಮೈಸೂರು: ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇವಲ ಊಹಾಪೋಹವಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ವಿರುದ್ಧದ ಅಸಮಾಧಾನದ ವದಂತಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು.

ಕಳೆದ ಎರಡು ದಿನಗಳಿಂದ ಇಂಧನ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಹೆಚ್ಚಾಗಿದೆ ಮತ್ತು ಇದರಿಂದ ಬೇಸತ್ತು ಜಾರ್ಜ್ ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಕೆಲವು ಹಳೆಯ ಮತ್ತು ಹೊಸ ಸ್ನೇಹಿತರು ಬೇರೆ ಬೇರೆ ಕಾರಣಗಳಿಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ. ಖುದ್ದು ಕೆ.ಜೆ. ಜಾರ್ಜ್ ಅವರೇ ತಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸಾರ್ವಜನಿಕರು ಇಂತಹ ವದಂತಿಗಳನ್ನು ನಂಬಬಾರದು,” ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಜಾರ್ಜ್ ಅವರ ಮನವೊಲಿಸಿದ್ದಾರೆ ಎಂಬ ಸುದ್ದಿಗೂ ಪ್ರತಿಕ್ರಿಯಿದ ಪೊನ್ನಣ್ಣ, “ರಾಜೀನಾಮೆ ನೀಡುವ ಪ್ರಸಂಗವೇ ಬಾರದಿದ್ದಾಗ ಸಂಧಾನದ ಪ್ರಶ್ನೆ ಎಲ್ಲಿಂದ ಬರುತ್ತದೆ? ಸಿಎಂ ಮತ್ತು ಜಾರ್ಜ್ ನಡುವೆ ಉತ್ತಮ ಸಂಬಂಧವಿದೆ. ಇದನ್ನು ಕೆಡಿಸಲು ಪ್ರತಿಪಕ್ಷದವರು ಪಿತೂರಿ ಮಾಡುತ್ತಿರಬಹುದು,” ಎಂದು ತಿರುಗೇಟು ನೀಡಿದರು.

Comments (0)

Your email address will not be published. Required fields are marked *

Back to top button