ರಾಜಕೀಯರಾಜ್ಯ

ಜಾತಿಗಣತಿಗೆ ಸರ್ಕಾರ ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿಲ್ಲ- ಆರ್ ಅಶೋಕ್

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರಕಾರದ ಜಾತಿಗಣತಿ ಸಂಸದ ರಾಹುಲ್ ಗಾಂಧಿ ಅವರಂತೆ ಗೊಂದಲ, ಅಯೋಮಯ ಮತ್ತು ಅಜ್ಞಾನದಿಂದ ಕೂಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ. ಜಾತಿಗಣತಿಗೆ ಸರ್ಕಾರ ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿಲ್ಲ. ಸ್ಪಷ್ಟವಾದ ಉದ್ದೇಶ ಕೂಡ ಇಲ್ಲ. ಅದು ಕೂಡ ರಾಹುಲ್ ಗಾಂಧಿಯಂತೆಯೇ ಎಂದು ಅಶೋಕ ವ್ಯಂಗ್ಯವಾಡಿದ್ದಾರೆ.

ಈಗ ಕಾಂಗ್ರೆಸ್ ಸರ್ಕಾರವು ದಸರಾ ಜಾತಿ ಗಣತಿಗಾಗಿ ಶಾಲೆಗಳ ರಜೆಯನ್ನು ವಿಸ್ತರಿಸಿದೆ. ಇದರಿಂದಾಗಿ ಶಿಕ್ಷಕರು ಗೊಂದಲಮಯ ಜಾತಿ ಗಣತಿಯನ್ನು ನಿಭಾಯಿಸಬಹುದು. ಆದರೆ, ಜನರ ಬಳಿ ಏನು ಕೇಳಬೇಕೆಂಬುದೇ ಗಣತಿದಾರರಿಗೆ ತಿಳಿಯುತ್ತಿಲ್ಲ. ಶಿಕ್ಷಕರನ್ನು ತರಗತಿಗಳಿಂದ ಹೊರಗೆಳೆದು ವಿದ್ಯಾರ್ಥಿಗಳ ಬಾಳಿನಲ್ಲಿ ಕತ್ತಲೆ ಆವರಿಸುವಂತೆ ಮಾಡಲಾಗುತ್ತಿದೆ.

ಕಾಂಗ್ರೆಸ್ಸಿನ ವಿಭಜನೆಯ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇವುಗಳನ್ನೆಲ್ಲ ಮಾಡಲಾಗುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ. ಇದು ಸಮೀಕ್ಷೆ ಅಲ್ಲ, ಇದು ದೋಷಗಳಿಂದ ಕೂಡಿದ ಸರ್ಕಸ್. ಅಧಿಕಾರಕ್ಕೆ ಅಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಗೆ ಕರ್ನಾಟಕದ ಮಕ್ಕಳು ಬೆಲೆ ತೆರುವಂತಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿಗದಿತ ಅವಧಿಯೊಳಗೆ ಮುಗಿಯದ ಕಾರಣ ಸರ್ಕಾರ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ, ಗಣತಿ ನಡೆಸುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ನೆರವಾಗುವುದಕ್ಕಾಗಿ ಅಕ್ಟೋಬರ್​ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ನೀಡಲು ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಟೀಕಿಸಿದೆ.

Comments (0)

Your email address will not be published. Required fields are marked *

Back to top button