ಬೆಂಗಳೂರು: ಗಣೇಶ ಮೆರವಣಿಗೆಗೆ ಮುಸ್ಲಿಮರು ಸಹಕಾರ ನೀಡಿದ್ದರು. ಕಲ್ಲುತೂರಾಟಕ್ಕೆ ಮುಸ್ಲಿಮರು ಪ್ರೋತ್ಸಾಹ ನೀಡಿಲ್ಲ. ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತಾಡಿದ್ದಾರೆ ಎಂದು ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಮದ್ದೂರು ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಮದ್ದೂರಿನಲ್ಲಿ ಈಗ ಎಲ್ಲವೂ ಶಾಂತವಾಗಿದೆ. ಆರಂಭದಲ್ಲಿ ಆದ ಘಟನೆ ಬಗ್ಗೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ..
ಮದ್ದೂರಿನಲ್ಲಿ ಬಿಜೆಪಿಯವರು ಬಂದ್ ಮಾದಿದ್ದೇ ಶಾಂತಿ ಕದಡೋಕೆ. ಅವರು ವಾತಾವರಣವನ್ನು ಕಲುಷಿತ ಮಾಡಲು ಹೀಗೆ ಮಾಡಿದ್ರಾ? ಇವರ ಉದ್ದೇಶ ಕೋಮು ಸಂಘರ್ಷ ಸೃಷ್ಟಿ ಮಾಡೋಕೆ ಮಾಡಿದ್ರಾ ಅಂತಾ ಅವರೇ ಯೋಚನೆ ಮಾಡಲಿ ಎಂದು ಸಚಿವ ಚಲುವರಾಯ ಸ್ವಾಮಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಕ್ರಮ ತೆಗೆದುಕೊಳ್ಳಲು ನಿಧಾನ ಮಾಡಿದ್ರೆ ಅವರು ಮಾಡಿದ್ದರಲ್ಲಿ ಅರ್ಥ ಇದೆ. ಕ್ರಮ ತೆಗೆದುಕೊಂಡ ಮೇಲೂ ಬಾಯಿಗೆ ಬಂದ ಹಾಗೆ ವೇದಿಕೆಯಲ್ಲಿ ನಿಂತು ಮಾತನಾಡುತ್ತಿದಾರೆ ಅಂದ್ರೆ ಮಂಡ್ಯ ಜಿಲ್ಲೆಯ ಶಾಂತಿ ಕದಡಲು ತಾನೇ? ಮಳವಳ್ಳಿ ಬಂದ್ ಏನಾಗಿದೆ. ಒಂದು ಅಂಗಡಿ ಮುಚ್ಚಿಲ್ಲ. ಬಿಜೆಪಿ ಅವರು ಮಂಡ್ಯಗೆ ಇಂತಹ ವಿಷಯಕ್ಕೆ ಬರಬೇಡಿ. ಇಂತಹ ವಿಷಯಗಳನ್ನ ಇಟ್ಟುಕೊಂಡು ಅಶಾಂತಿ ನಿರ್ಮಾಣ ಮಾಡೋಕೆ ಬರಬೇಡಿ ಎಂದು ಹರಿಹಾಯ್ದರು.
ಇನ್ನು ಸಿ.ಟಿ ರವಿ ಮೇಲೆ ಎಫ್ಐಆರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ ರವಿ ಮಂತ್ರಿ ಆಗಿದ್ದವರು. ಕಾಲು ಮುರಿಯುತ್ತೀವಿ, ಕೈ ಮುರಿತೀವಿ ಅಂದರೆ ಹೇಗೆ? ಸಿ.ಟಿ ರವಿ ಇನ್ನು ಕಲಿಯೋ ಹಾಗೇ ಕಾಣುತ್ತಿಲ್ಲ. ಕಾನೂನು ಇರೋದು ಕ್ರಮ ತೆಗೆದುಕೊಳ್ಳೋಕೆ. ಘಟನೆ ಆಗಿರೋದು ಸತ್ಯ, ಕ್ರಮ ಆಗಿದೆ. ಇದು ಪೂರ್ವ ನಿಯೋಜನೆನಾ ಅಲ್ಲವಾ ಎಂದು ತನಿಖೆ ಆಗಬೇಕು. ನಮ್ಮ ಹುಡುಗರ ಮೇಲೆ ಕ್ರಮ ಆಗಲಿ ಅಂತ ಆ ಸಮುದಾಯದವರು ಹೇಳಿದ್ದಾರೆ.