ರಾಜಕೀಯಸುದ್ದಿ

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಕೂಡಿಬಂತು ಕಾಲ!

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲೂಕು, ಜಿಲ್ಲಾ ಪಂಚಾಯಿತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ನಡೆಯಲಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಲೋಕಸಭಾ ಚುನಾವಣೆ ಫಲಿತಾಂಶ(ಜೂನ್ 4) ಪ್ರಕಟವಾದ ಬಳಿಕ ಆದಷ್ಟು ಬೇಗ ನಡೆಸುತ್ತೇವೆ. ಸರ್ಕಾರ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲ್ಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಸಲಾಗುವುದು. ಸರ್ಕಾರ ಚುನಾವಣೆ ನಡೆಸಲು ಸಿದ್ಧವಿದೆ. ಕ್ಷೇತ್ರ ಪುನರ್ವಿಗಂಡಣೆಗೆ ಜನವರಿವರೆಗೆ ಗಡುವು ಇದ್ದು, ಈ ಬಗ್ಗೆ ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಮೂರು ವರ್ಷದಿಂದ ಚುನಾವಣೆ ಇಲ್ಲ!

ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಅವಧಿ ಮುಗಿದು ಬರೋಬ್ಬರಿ ಮೂರು ವರ್ಷ ಆಗಿದೆ. 2021ರ ಏಪ್ರಿಲ್‌ನಲ್ಲಿಯೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯಬೇಕಿತ್ತು. ಆದರೆ, ಅವಧಿ ಮುಗಿದಿದ್ದರೂ ಹೊಸ ಚುನಾವಣೆ ಇನ್ನೂ ಸಹ ನಡೆದಿಲ್ಲ. ವಿವಿಧ ಕಾರಣಗಳಿಂದ (ಕ್ಷೇತ್ರ ಪುನರ್​ ವಿಂಗಡಣೆ ಹಾಗೂ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ಹೈಕೋರ್ಟ್​ನಲ್ಲಿದೆ. ಹೀಗಾಗಿ ಚುನಾವಣೆಗೆ ವಿಳಂಬವಾಗುತ್ತಿದೆ. ಹಾಗೇ ಈ ಹಿಂದಿನ ಸರ್ಕಾರ ಕೆಲ ಕಾರಣಾಂತರಗಳಿಂದ ಚುನಾವಣೆಯನ್ನು ಮುಂದೂಡತ್ತಲೇ ಬಂದಿತು.

ಈಗಾಗಲೇ ಚುನಾವಣೆ ವಿಳಂಬ ಆಗಿರುವುದಕ್ಕೆ ಈ  ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ 5 ಲಕ್ಷ ರೂ. ದಂಡವನ್ನು ಕೂಡ ಪಾವತಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗದಿ ಪ್ರಕ್ರಿಯೆ ಮುಗಿದಿದೆ. ವಿಧಾನಸಭಾ ಚುನಾವಣೆ ಮುಕ್ತಾಯದ ಬಳಿಕ ಜಿಪಂ ಮತ್ತು ತಾಪಂ ಚುನಾವಣೆ ನಡೆಸುತ್ತೇವೆ ಎಂದು ಹೈಕೋರ್ಟ್‌ಗೆ ಸರ್ಕಾರ ತಿಳಿಸಿತ್ತು. ಆದ್ರೆ, ಚುನಾವಣೆ ನಡೆಸಲೇ ಇಲ್ಲ.

ಚುನಾವಣೆ ಯಾವಾಗ ನಡೆಯಬಹುದು ?

ಈಗ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಬಂದ ವರ್ಷದ ಆಗಿದ್ದು, ಇದೀಗ ಜೂನ್ 4ರಂದು ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಚುನಾವಣೆಗಳನ್ನು ನಡೆಸಲು ಮುಂದಾಗಿದೆ. ಆದ್ರೆ, ಅದ್ಯಾವಾಗ ನಡೆಸುತ್ತಾರೋ ಗೊತ್ತಿಲ್ಲ. ಮೀಸಲಾತಿ,  ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಪ್ರಕರಣಗಳು ಕೋರ್ಟ್​ನಲ್ಲಿ ಇರುವುದರಿಂದ ಇನ್ನಷ್ಟು ತಿಂಗಳು ವಿಳಂಬವಾಗುವ ಸಾಧ್ಯತೆಗಳು ಇವೆ. ಒಂದು ವೇಳೆ ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಕೋರ್ಟ್​ ಕಾನೂನು ಪ್ರಕ್ರಿಯೆ ಮುಗಿಸುವುದರ ಜೊತೆಗೆ ಮೀಸಲಾತಿ ನಿಗದಿಪಡಿಸಿದರೆ ಮುಂದಿನ ಒಂದೆರೆಡು ತಿಂಗಳಲ್ಲೇ ಚುನಾವಣೆ ನಡೆಸಬಹುದು.

ಇದೀಗ ಸಿದ್ದರಾಮಯ್ಯ ಅವರು ಚುನಾವಣೆ ನಡೆಸುವ ಬಗ್ಗೆ ಮಾತನಾಡಿದ್ದು, ಜಿಲ್ಲಾ ಅಥವಾ ತಾಲೂಕು ಪಂಚಾಯಿತಿ ಚುನಾವಣೆಗೆ ನಿಲ್ಲಬೇಕು ಎಂದು ಕಾದು ಕುಳಿತಿರುವ ಸ್ಥಳೀಯ ರಾಜಕೀಯ ಮುಖಂಡರು ಸಂತಸಗೊಂಡಿದ್ದಾರೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button