ರಾಮನಗರ : ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಏಪ್ರಿಲ್ 1ರಿಂದ ಹೆಚ್ಚಳವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ನಿಡಘಟ್ಟ, ಕಣಮಿಣಿಕೆ ಹಾಗೂ ಶೇಷಗಿರಿಹಳ್ಳಿ ಟೋಲ್ ಪ್ಲಾಜಾವರೆಗಿನ 56 ಕಿ.ಮೀ. ಉದ್ದದ ಹೆದ್ದಾರಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದೆ. ಇದರೊಂದಿಗೆ ಒಂದು ವರ್ಷದ ಅವಧಿಯಲ್ಲಿ ಹೆದ್ದಾರಿ ಟೋಲ್ ಎರಡು ಸಲ ಪರಿಷ್ಕರಣೆಯಾಗಿದೆ.
ಕಳೆದ ಏಪ್ರಿಲ್ನಲ್ಲಿ ಪ್ರಾಧಿಕಾರ ಟೋಲ್ ಹೆಚ್ಚಳ ಮಾಡಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಿರ್ಧಾರ ಕೈ ಬಿಟ್ಟಿತ್ತು. ಎರಡು ತಿಂಗಳ ಬಳಿಕ ಜೂನ್ನಲ್ಲಿ ಏಕಾಏಕಿ ಶೇ.33ರಷ್ಟು ಹೆಚ್ಚಳವಾಗಿತ್ತು. ಅದಾದ 9 ತಿಂಗಳ ಬಳಿಕ ಮತ್ತೆ ಟೋಲ್ ಏರಿಕೆಯಾಗಿದೆ.
ನಿಯಮ ಪ್ರಕಾರ ಪರಿಶೀಲನೆ : ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ – 2008 ರ ಪ್ರಕಾರವೇ ಟೋಲ್ ಪರಿಷ್ಕರಿಸಲಾಗಿದೆ. ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ವಾಹನಗಳ ಸವಾರರಿಗೆ ಮಾಸಿಕ ಪಾಸ್ ಶುಲ್ಕವನ್ನು ₹ 340 ನಿಗದಿಪಡಿಸಲಾಗಿದೆ. ಎಂದು ರಾಷ್ಟ್ರೀಯ ಹೆದ್ದಾರಿ ಪ್ರಧಾಇಕಾರದ ಬೆಂಗಳೂರು-ಮೈಸೂರು ಹೆದ್ದಾರಿ ವಿಭಾಗದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ತಿಳಿಸಿದರು.
ಎಲ್ಲಾ ಬಗೆಯ ವಾಹನಗಳು 24 ತಾಸಿನೊಳಗೆ ಹಿಂದಿರುಗಿ ಬಂದಲ್ಲಿ ಪಾವತಿಸಬೇಕಾದ ಟೋಲ್ನಲ್ಲಿ ಶೇ 25 ರಷ್ಟು ರಿಯಾಯಿತಿ ಸಿಗಲಿದೆ. ಅದೇ ರೀತಿ ಎಲ್ಲಾ ವಾಹನಗಳು ಟೋಲ್ ಪಾವತಿ ದಿನದಿಂದ ಒಂದು ತಿಂಗಳೊಳಗೆ 50 ಸಲ ಪ್ರಯಾಣಿಸಿದ್ದಲ್ಲಿ ಶೇ 35 ರಷ್ಟು ರಿಯಾಯಿತಿ ಸೌಲಭ್ಯಕ್ಕೆ ಆರ್ಹರಾಗಿದ್ದಾರೆ. ಯಾವುದೇ ವಾಹನ ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಭಾರ ಹೊಂದಿದ್ದರೆ ನಿಗದಿತ ಶುಲ್ಕದ ಹತ್ತು ಪಟ್ಟು ಶುಲ್ಕ ಪಾವತಿಸಿಕೊಂಡು ಭಾರ ಖಾಲಿ ಮಾಡಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಬಳಿ ಹೆದ್ದಾರಿ ಪ್ರಾಧಿಕಾರ ಎರಡು ಟೋಲ್ ಪ್ಲಾಜಾ ನಿರ್ಮಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಕಣಮಿಣಕಿ ಬಳಿ ಹಾಗೂ ಮೈಸೂರು – ರಾಮನಗರ ಕಡೆಯಿಂದ ಬೆಂಗಳೂರು ಪ್ರವೇಶಿಸುವವರು ಶೇಷಗಿರಿಹಳ್ಳಿ ಬಳಿ ಟೋಲ್ ಕಟ್ಟಬೇಕಿದೆ.