ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಸಚಿವ ರಾಜಣ್ಣ ಹನಿಟ್ರ್ಯಾಪ್ ಬಾಂಬ್ ಸಿಡಿಸಿದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿತ್ತು. ಅದಾದ ಬಳಿಕ ಎಂಎಲ್ಸಿ ರಾಜೇಂದ್ರ ಅವರು ಹನಿಟ್ರ್ಯಾಪ್ಗೆ ಬಂದವರು ನನ್ನ ಹತ್ಯಗೆ ಸಂಚು ರೂಪಿಸಿದ್ದರು. ನನ್ನ ಹತ್ಯೆಗೈಯಲು 70 ಲಕ್ಷ ಸುಪಾರಿ ನೀಡಲಾಗಿತ್ತೆಂದು ರಾಜೇಂದ್ರ ಸ್ಪೋಟಕ ಹೇಳಿಕೆ ನೀಡಿ, ತುಮಕೂರು ಎಸ್ಪಿಗೆ ದೂರು ನೀಡಿದ್ರು.
ಇದೀಗ ಎಂಎಲ್ಸಿ ರಾಜೇಂದ್ರ ಅವರ ದೂರಿನ ಮೇರೆಗೆ ಕ್ಯಾತಸಂದ್ರ ಪೋಲಿಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇತರ ಆರೋಪಿಗಳಾದ ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, ಅವರನ್ನು ಶೀಘ್ರದಲ್ಲೇ ತನಿಖೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್ಎಸ್ನ ಸೆಕ್ಷನ್ 109, 329(4), 61(2), 190, 109 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಅಜ್ಞಾತ’ ವ್ಯಕ್ತಿಗಳು ತನ್ನನ್ನು ಕೊಲ್ಲಲು ‘ಸುಪಾರಿ’ ನೀಡಿದ್ದಾರೆ ಎಂದು ಆರೋಪಿಸಿರುವ ರಾಜೇಂದ್ರ, ತುಮಕೂರು ಎಸ್ಪಿ ಅಶೋಕ್ ಕೆ.ವಿ ಅವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದರು. ಸಚಿವರ ನಿವಾಸವು ಅಲ್ಲಿರುವುದರಿಂದ ಎಫ್ಐಆರ್ ದಾಖಲಿಸಲು ಎಸ್ಪಿ ಪ್ರಕರಣವನ್ನು ಕ್ಯಾತಸಂದ್ರ ಪೊಲೀಸರಿಗೆ ವರ್ಗಾಯಿಸಿದರು. ಇದೀಗ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.