Top Newsಸುದ್ದಿ

ವಕ್ಫ್‌ ಆಸ್ತಿ ವಿವಾದ – ಶಾಂತಿಯುತ ರಾಜ್ಯದಲ್ಲಿ ಜಮೀರ್‌  ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ: ವಿಜಯೇಂದ್ರ ಆಗ್ರಹ

ಚಿತ್ರದುರ್ಗ: ಸಚಿವ ಜಮೀರ್ ಅಹ್ಮದ್‌ರನ್ನ ಗಡಿಪಾರು ಮಾಡಿದ್ರೆ ರಾಜ್ಯಕ್ಕೆ ಒಳಿತು. ಶಾಂತಿಯುತ ರಾಜ್ಯದಲ್ಲಿ ಜಮೀರ್‌  ಅವರಿಂದ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಅಹಿಂದ ಹೆಸರು ಹೇಳಿ ಅಹಿಂದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಆಸ್ತಿ, ರೈತರ ಜಮೀನು, ಮಠ ಮಾನ್ಯಗಳ ಆಸ್ತಿ ಕಬಳಿಸುವ ಕೆಲಸ ಆಗುತ್ತಿದೆ. ಆದ್ರೆ ಸಿಎಂ ಸಿದ್ಧರಾಮಯ್ಯ ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ರೈತರಿಗೆ ನೀಡಿದ ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ತಾಕತ್ತಿದ್ದರೆ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಲಿ ಎಂದು ಸವಾಲ್‌ ಹಾಕಿದ್ದಾರೆ.

ಸಚಿವ ಜಮೀರ್ ಅಹ್ಮದ್ ಸಂವಿಧಾನದ ಬಗ್ಗೆ ಮಾತಾಡುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಗೂಂಡಾಗಿರಿ ಮಾಡಿ, ರೈತರ ಜಮೀನು, ಮಠಮಾನ್ಯಗಳ ಆಸ್ತಿ ಕಬಳಿಕೆ ಮಾಡಲಾಗುತ್ತಿದೆ. ವಕ್ಫ್ ಮೂಲಕ ಸಚಿವ ಜಮೀರ್ ಅಹ್ಮದ್ ಭೂಕಬಳಿಕೆ ಕೆಲಸ ಮಾಡ್ತಿದ್ದಾರೆ. ಅವರನ್ನ ಗಡಿಪಾರು ಮಾಡಿದ್ರೆ ಈ ರಾಜ್ಯಕ್ಕೆ ಒಳಿತು ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ಸರ್ಕಾರದ ಆಡಳಿತದ ಕುರಿತು ಮಾತನಾಡಿ, ಸಿಎಂ ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಮತ್ತೊಂದು ಕಡೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುವ ವಾತಾವರಣ ಇದೆ. ಆದ್ದರಿಂದ ಸಿದ್ಧರಾಮಯ್ಯ ಆತಂಕದಲ್ಲಿ ಇದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆಂದು ಬೊಬ್ಬೆ ಹೊಡೀತಿದ್ದರು. ಈಗ ಸಿಎಂ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಡಾ ಹಗರಣದಿಂದ ಸಿದ್ಧರಾಮಯ್ಯ ಬಣ್ಣ ಬಯಲಾಗಿದೆ. ಇಡಿ ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ. ಸಚಿವರ ಆಪ್ತ ಮುಡಾ ಕಮಿಷನರ್ ದಿನೇಶ್‌ ಓಡಿ ಹೋಗಿದ್ದಾನೆ. ವಾಲ್ಮೀಕಿ ಹಗರಣದ ಬಗ್ಗೆ ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Comments (0)

Your email address will not be published. Required fields are marked *

Back to top button