ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಕನಸಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಟಾಂಗ್ ನೀಡಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಪರಮೇಶ್ವರ್, ಮುಖ್ಯಮಂತ್ರಿಗಳು (ಸಿದ್ದರಾಮಯ್ಯ) ದೀರ್ಘಾವಧಿ ಸಿಎಂ ಆಗಲೆಂದು ನಾನು ಹಾರೈಸುತ್ತೇನೆ. ದಾಖಲೆ ಮಾಡಲಿ ಅಂತ ನಾನು ಬಯಸುತ್ತೇನೆ ಅಂತ ಹೇಳಿದ್ದಾರೆ.
ಜಿ. ಪರಮೇಶ್ವರ್ ಹೇಳಿದ್ದೇನು?
ನಾನು ಕೂಡ ಮೊನ್ನೆ ಹೇಳಿಕೆ ಕೊಟ್ಟಿದ್ದೇನೆ. ಚುನಾವಣೆ ಮುಗಿದ ಬಳಿಕ ಶಾಸಕರು ಸಿಎಲ್ಪಿ ಲೀಡರ್ ಅನ್ನು ಆಯ್ಕೆ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ನಾಯಕರನ್ನಾಗಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಎರಡೂವರೆ ವರ್ಷಕ್ಕೆ ಮಾತ್ರ ಆಯ್ಕೆ ಮಾಡಿಕೊಳ್ಳಿ. ಮತ್ತೆ ಎರಡೂವರೆ ವರ್ಷಕ್ಕೆ ಬದಲಾಯಿಸುತ್ತೇವೆ ಎಂದು ಹೇಳಿಲ್ಲ. ನಾವು ಅಂದುಕೊಂಡಿದ್ದು ಐದು ವರ್ಷಕ್ಕೆ ಅಂತಾ.
ಹಾಗಾಗಿ ನಮ್ಮ ಮನಸ್ಸಿನಲ್ಲಿ ಅದನ್ನೇ ಇಟ್ಟುಕೊಂಡಿದ್ದೇವೆ. ಅದೇ ರೀತಿ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಆಗಲೆಂದು ನಾನು ಹಾರೈಸುತ್ತೇನೆ.
ಈ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ದಾಖಲೆ ಆಗಲಿದೆ ಎಂದಿದ್ದಾರೆ. ಪರಮೇಶ್ವರ್ ಅವರ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಪರ ಇರುವ ಶಾಸಕರೂ ಕೂಡ ಸಿದ್ದು ಪರ ಹೇಳಿಕೆ ನೀಡುತ್ತಿದ್ದು ಸಹಜವಾಗಿ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಕನಸಿಗೆ ನೀರೆರೆದಂತಾಗಿದೆ.