ಜಾತಿ ಸಂಖ್ಯೆ ಕಡಿಮೆಯಾಯಿತು ಎಂದು ಮಂಗ್ಯಾಗಳ ತರ ಕಿತ್ತಾಡಬೇಡಿ, ಹಿಂದೂಗಳಾಗಿ ಈ ಜಾತಿಗಣತಿ ನೋಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಜಾತಿಗಣತಿ ಸಂಖ್ಯೆ ಹೊರಹಾಕಿ ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷ ಹಾಗೂ ಪ್ರತಿಪಕ್ಷ ಇಬ್ಬರನ್ನು ಕುರಿ ಮಾಡಿದ್ದಾರೆ. ವಾಸ್ತವ ವಿಚಾರಗಳನ್ನು ಮರೆಮಾಚಲು ಸಿದ್ದರಾಮಯ್ಯ ಜಾತಿಗಣತಿ ಮುನ್ನೆಲೆಗೆ ತಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಒಡೆಯುತ್ತಿರುವುದು ಯಾವುದೋ ಒಂದು ಜಾತಿ ಅಲ್ಲ. ಒಟ್ಟಾರೆ ಹಿಂದೂ ಧರ್ಮವನ್ನು ಒಡೆಯಲು ಹೊರಟ್ಟಿದ್ದಾರೆ. ಹಿಂದೂಗಳಲ್ಲಿನ ಎಲ್ಲ ಜಾತಿಗಳನ್ನು ಒಡೆದಿದ್ದಾರೆ. ಲಿಂಗಾಯತರು, ಒಕ್ಕಲಿಗರು, ಒಬಿಸಿ ಸಂಖ್ಯೆ ಕಡಿಮೆ ಆಯಿತು ಅನ್ನೋದಷ್ಟೆ ನೋಡಬೇಡಿ. ಒಟ್ಟಾರೆ ಹಿಂದೂಗಳ ಸ್ಥಿತಿ ಏನಾಗಿದೆ ನೋಡಿ ಎಂದರು.
ನಮ್ಮ ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತಾ ಪರಸ್ಪರ ಮಂಗ್ಯಾಗಳ ತರ ಕಿತ್ತಾಡಬೇಡಿ. ಹಿಂದೂಗಳಾಗಿ ಈ ಜಾತಿಗಣತಿ ನೋಡಿ. ಯಾರ ಮನೆಗೆ ಬಂದು ಜಾತಿಗಣತಿ ಮಾಡಿದ್ದಾರೆ? ಸಿಎಂ ಎಲ್ಲರನ್ನು ಕುರಿ ಮಾಡುತ್ತಿದ್ದಾರೆ. ಆಗ ಅಹಿಂದ ಅಂತಾ ಒಂದು ವರ್ಗ ಒಡೆದರು. ಈಗ ಜಾತಿಗಣತಿ ಹೆಸರಲ್ಲಿ ಇಡೀ ಹಿಂದೂ ಧರ್ಮ ಒಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಲೆ ಏರಿಕೆಯಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ನಡೆದಿದೆ. ಇವೆಲ್ಲವನ್ನು ಮರೆ ಮಾಚಲು ಜಾತಿಗಣತಿ ಬಿಚ್ಚಿಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ನಾಟಕ ಇದು. ಕಾಂಗ್ರೆಸ್ನಲ್ಲಿ 35 ಜನ ವೀರಶೈವ ಶಾಸಕರಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿ ಬಿಟ್ಟು ಕೊಡುತ್ತಾರಾ? ಲಿಂಗಾಯತರಿಗೆ, ಒಕ್ಕಲಿಗರು, ಒಬಿಸಿ ಎಲ್ಲದರಲ್ಲೂ ಉಪಜಾತಿ ಲೆಕ್ಕ ಹಾಕಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ರಲ್ಲಿ ಉಪಜಾತಿ ಯಾಕೆ ಲೆಕ್ಕ ಹಾಕಿಲ್ಲ ಎಂದು ಪ್ರಶ್ನಿಸಿದರು.