ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ. ಇನ್ನು ಮುಂದಾದರೂ ಸಿಎಂ ಸಿದ್ದರಾಯ್ಯ ಅವರು ತಮ್ಮ ಹೇಳಿಕೆಗಳಿಂದ ಕನ್ನಡಿಗರು ತಲೆ ತಗ್ಗಿಸುವಂತಹ ಸನ್ನಿವೇಶ ನಿರ್ಮಾಣವಾಗದಂತೆ ವರ್ತಿಸಿ ಎಂದು ಆರ್.ಅಶೋಕ್ ಟ್ವೀಟ್ ಮೂಲಕ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರು, ಪಹಲ್ಗಾಮ್ ಉಗ್ರರ ದಾಳಿ ಘಟನೆ ಕುರಿತು ಹೇಳಿಕೆ ನೀಡಿದ್ದ ವಿಷಯ ಭಾರೀ ಟೀಕೆಗೆ ಒಳಗಾಗಿ ನಂತರ ಮುಖ್ಯಮಂತ್ರಿಗಳು ಸಮರ್ಥನೆ ಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ಈ ರೀತಿಯ ಸಲಹೆ ನೀಡಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಸಿಎಂ ಸಿದ್ದರಾಮಯ್ಯ ನವರೇ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಕೆಟ್ಟ ಮೇಲಾದರೂ ತಮಗೆ ಬುದ್ಧಿ ಬಂತಲ್ಲ ಎನ್ನುವ ಸಮಾಧಾನ ಒಂದು ಕಡೆಯಾದರೆ, ಓಲೈಕೆ ರಾಜಕಾರಣಕಾಗಿ ರಾಷ್ಟ್ರೀಯ ಭದ್ರತೆ ವಿಷಯದಲ್ಲೂ ರಾಜಿ ಮಾಡಿಕೊಳ್ಳಲು ಹೇಸುವುದಿಲ್ಲವಲ್ಲ ಎಂಬ ಆತಂಕ ಮತ್ತೊಂದು ಕಡೆ.
ತಮ್ಮ ಬಾಲಿಶ ಹೇಳಿಕೆ ಶತ್ರುರಾಷ್ಟ್ರದ ಷಡ್ಯಂತ್ರ, ಕುತಂತ್ರಕ್ಕೆ ಆಹಾರವಾಯಿತು, ತಮ್ಮ ಬೇಜವಾಬ್ದಾರಿ ಹೇಳಿಕೆ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟುಮಾಡಿತು ಎಂಬ ವಾಸ್ತವದ ಅರಿವು ತಮಗಾಗಿದೆ ಎಂದು ಭಾವಿಸುತ್ತೇನೆ. ಇನ್ನು ಮುಂದಾದರೂ ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ. ತಮ್ಮ ಸ್ಥಾನಕ್ಕೆ ತಕ್ಕಂತಹ ಗಾಂಭೀರ್ಯತೆ, ಸಮಯ ಪ್ರಜ್ಞೆ, ಮುತ್ಸದ್ದಿತನ ರೂಢಿಸಿಕೊಳ್ಳಿ. ಇನ್ನು ಮುಂದಾದರೂ ತಮ್ಮ ಹೇಳಿಕೆಗಳಿಂದ ಕನ್ನಡಿಗರು ತಲೆ ತಗ್ಗಿಸುವಂತಹ ಸನ್ನಿವೇಶ ನಿರ್ಮಾಣವಾಗದಂತೆ ವರ್ತಿಸಿ.ವರ್ತಿಸಿ ಎಂದು ಸಲಹೆ ನೀಡಿದ್ದಾರೆ.