ಗದಗ: ಶಾಲೆಯ ಪಠ್ಯದ ಹೊರೆ ಇಳಿಸಲು ಕೆರೆಗೆ ಈಜಲು ತೆರಳಿದ್ದ ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಪರಶುರಾಮ ವಡ್ಡರ ಹಾಗೂ ಬೆಳದಡಿ ಗ್ರಾಮದ ಬಸವರಾಜ ಬಡಿಗೇರ ಮೃತ ದುರ್ದೈವಿಗಳು. ಇವರಿಬ್ಬರೂ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಶನಿವಾರ ಶಾಲೆಯ ಅವಧಿ ಮುಗಿದ ನಂತರ, ಈ ಇಬ್ಬರು ಮತ್ತೊಬ್ಬ ಗೆಳೆಯನೊಂದಿಗೆ ಸೇರಿ ಗ್ರಾಮದ ಕೆರೆಗೆ ಈಜಲು ಹೋಗಿದ್ದರು.
ಕೆರೆಯ ಆಳದ ಅರಿವಿಲ್ಲದೆ ನೀರಿಗಿಳಿದ ಪರಶುರಾಮ ಮತ್ತು ಬಸವರಾಜ ನೀರಿನ ಸುಳಿಗೆ ಸಿಲುಕಿ ಮುಳುಗಿದ್ದಾರೆ. ಅವರೊಂದಿಗೆ ಇದ್ದ ಇನ್ನೊಬ್ಬ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಮಾರು 20 ಅಡಿ ಆಳದ ಈ ಕೆರೆಯಲ್ಲಿ ಹೂಳು ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳು ಮೇಲೆ ಬರಲು ಸಾಧ್ಯವಾಗದೆ ಜಲಸಮಾಧಿಯಾಗಿದ್ದಾರೆ .
ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಸಿಬ್ಬಂದಿ ಸಕಾಲಕ್ಕೆ ಸ್ಥಳಕ್ಕೆ ಆಗಮಿಸಲಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಸ್ಥಳೀಯರು ಮತ್ತು ಮುಳುಗು ತಜ್ಞರು ಹರಸಾಹಸ ಪಟ್ಟು ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


