ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧಕರಿಗೆ ಮತ್ತು ಭಕ್ತರಿಗೊಂದು ಸಂತಸದ ಸುದ್ದಿ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆಗಳ ಸಹಯೋಗದಲ್ಲಿ ಮೂಡಿಬಂದಿರುವ ‘ರಾಯರ ದರ್ಶನ’ ಆಲ್ಬಂ ಸಾಂಗ್ನ ಟೀಸರ್ ಮತ್ತು ಪೋಸ್ಟರ್ ಅನ್ನು ರಾಯರ ವರ್ಧಂತಿಯ ಶುಭ ಸಂದರ್ಭದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ.

ಮಂತ್ರಾಲಯದ ಮಠಾಧೀಶರಾದ ಸುಬುಧೇಂದ್ರ ತೀರ್ಥರು ಈ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಆಶೀರ್ವದಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ನವರಸ ನಾಯಕ ಜಗ್ಗೇಶ್, ‘ಕಾಂತಾರ’ ಖ್ಯಾತಿಯ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ, ಸಂಸ್ಥೆಯ ಎಂ.ಡಿ ಸುಗುಣಾ ರಘು ಮತ್ತು ಸಿಇಓ ರಘು ಭಟ್ ಉಪಸ್ಥಿತರಿದ್ದರು. ರಘು ಭಟ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಿ.ಆರ್. ಬಾಬಿ ಮತ್ತು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ. ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿರುವ ಈ ಆಲ್ಬಂ ಹಾಡು ಸದ್ಯದಲ್ಲೇ ಭಕ್ತರ ಮುಂದೆ ಬರಲು ಸಿದ್ಧವಾಗುತ್ತಿದೆ.


