ರಾಯಚೂರು : ಅಕ್ರಮ ಮರಳು ಸಾಗಣೆ ಟ್ರಾಕ್ಟರ್ ಜಪ್ತಿ ಮಾಡಿದ್ದಕ್ಕೆ ಶಾಸಕರ ಪುತ್ರ , ಆಪ್ತ ಸಹಾಯಕರು ಸೇರಿ, ಪೇದೆಯನ್ನು ಪ್ರವಾಸಿ ಮಂದಿರಕ್ಕೆ ಕರೆಸಿ ಹಲ್ಲೆ ಮಾಡಿದ್ದಾರೆ. ಆದ್ರೆ ಇದನ್ನು ನನ್ನ ಹೆಸರು ಕೆಡಿಸಲು ಹುನ್ನಾರ ಮಾಡಿದ್ದಾರೆ ಎಂದು ಪುತ್ರ, ಆಪ್ತ ಸಹಾಯಕನ ಪರ ರಾತ್ರಿಯಿಡೀ ಪೊಲೀಸ್ ಠಾಣೆ ಮುಂದೆ ಕೂತು ಪ್ರತಿಭಟನೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಪೇದ ಹಣಮಂತ್ರಾಯ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ಶಾಸಕಿ ಪುತ್ರ ಸಂತೋಷ್ ಪೇದೆಗೆ ಕರೆ ಮಾಡಿ ಐಬಿಗೆ ಬರುವಂತೆ ಹೇಳಿದ್ದಾರೆ. ಶಾಸಕರ ಪುತ್ರ ಕರೆದಿದ್ದಾನೆ ಎಂದು ಪೇದೆ ಅಲ್ಲಿಗೆ ಹೋಗಿದ್ದಾರೆ. ಕೋಣೆಯೊಳಗೆ ಹೋಗುತ್ತಿದ್ದಂತೆ ಅಲ್ಲಿದ್ದ ಮರಳು ದಂಧೆಕೋರರು ಸೇರಿ ಸಂತೋಷ, ತಿಮ್ಮಾರೆಡ್ಡಿ, ಆಪ್ತ ಸಹಾಯಕ ಇಲಿಯಾಸ್, ರಫೀಕ್ ಸೇರಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇನ್ನೂ ಘಟನೆ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇದೆ ದೂರು ದಾಖಲಿಸಿದ್ದಾರೆ. ಶಾಸಕಿ ಪುತ್ರ ಸಂತೋಷ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ರಫೀಕ್ ಸೇರಿ 8 ಜನ ವಿರುದ್ದ ಕೇಸ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪೊಲೀಸ್ ಠಾಣೆ ಮುಂದೆ, ಪುತ್ರ, ಸಹೋದರ ಹಾಗೂ ಆಪ್ತ ಕಾರ್ಯದರ್ಶಿ ಪರವಹಿಸಿ ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೂರ್ವಾಪರ ಪರಿಶೀಲನೆ , ತನಿಖೆ ಮಾಡದೆ ಪಿ.ಎ ಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಪೇದೆ ಕುಡಿದಿದ್ದಾನೆ ಅವನ ಮಾತು ನಂಬಿ ಜಾತಿನಿಂದನೆ ಕೇಸ್ ಹೇಗೆ ಹಾಕಿದ್ರಿ, ನಾವೂ ಸಹ ಅಟ್ರಾಸಿಟಿ ದಾಖಲಿಸುತ್ತೇವೆ ಎಂದು ಶಾಸಕಿ ಪಟ್ಟು ಹಿಡಿದಾಗ ದೂರು ತೆಗೆದುಕೊಳ್ಳಲು ದೇವದುರ್ಗ ಪೊಲೀಸರು ನಿರಾಕರಿಸಿದ್ದಾರೆ.
ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದೀರಿ ಎಂದು ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಠಾಣೆ ಮುಂದೆ ಶಾಸಕಿ ಪ್ರತಿಭಟನೆ ಮಾಡಿದ್ದಾರೆ. ಗಾಯಾಳು ಪೊಲೀಸ್ ಹೆಡ್ ಕಾನ್ಸ್ಸ್ಟೇಬಲ್ ಅಮಾನತು ಆಗಬೇಕು. ಬೆಳಗಾಗೋವಷ್ಟರಲ್ಲಿ ಠಾಣೆಯಲ್ಲಿ ಪಿಐ ಇರಬಾರದು. ಪೊಲೀಸರ ಫ್ರೀ ಪ್ಲ್ಯಾನ್ ನಿಂದಾಗಿ ಈ ಕೃತ್ಯ ಮಾಡಲಾಗಿದೆ. ಹೊಡಿಸಿಕೊಂಡ ಪೊಲೀಸ್ ಏನ್ ಹೀರೋ ಆದ್ನಾ? ಅವನು ಕುಡಿದು ಅಳಕತ್ಯಾನ? ಅವನ ಮಾತು ಕೇಳ್ತಿರಾ ನೀವು. ನೀವೆಲ್ಲಾ ಏನ್ ಸತ್ಯ ಹರಿಶ್ಚಂದ್ರರಾ? ನಿಮ್ಮ ಆಟ ನನಗೆ ಗೊತ್ತಿಲ್ವಾ? ಎಂದು ಶಾಸಕಿ ಪ್ರತಿಭಟನೆ ನಡೆಸಿದ್ದಾರೆ. ನನ್ನ ಮೇಲೆ ಲಾರಿ ಹರಿಸುವ ಬೆದರಿಕೆ ಹಾಕಿದ್ದರು. ಇದರ ಬಗ್ಗೆ ದೂರು ದಾಖಲು ಆಗಿದೆ. ಆದರೆ ಅವರ ವಿರುದ್ಧ ಏನು ಕ್ರಮ ತಗೊಂಡಿದ್ದಾರೋ ಗೊತ್ತಿಲ್ಲ. ನನ್ನ ಮೇಲೆ ಅಧಿಕಾರಿಗಳಿಗೆ ಏನೋ ಪ್ರತಿಷ್ಠೆನೋ ಏನೋ. ಯಾರ ಪ್ರಭಾವ, ಕೈವಾಡದಿಂದ ಅಧಿಕಾರಿಗಳು ಈ ರೀತಿ ನಡೆದುಕೊಳ್ತಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.
ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಎಸ್ ಪಿ ನಿಖಿಲ್ ಬಿ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಶಾಸಕಿ ಪ್ರತಿಭಟನೆ . ಆದ್ರೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.