
ಗುತ್ತಿಗೆದಾರರ ಸಂಘದಲ್ಲಿ ನಡೆದಿದೆ ಎನ್ನಲಾದ ಕಮಿಷನ್ ದಂಧೆಯ ಪ್ರಕರಣವೊಂದು ಈಗ ದೊಡ್ಡ ತಿರುವು ಪಡೆದುಕೊಂಡಿದೆ. ಸಣ್ಣ ಗುತ್ತಿಗೆದಾರರಿಂದಲೇ ಕಮಿಷನ್ ಕೇಳಿದ ಆರೋಪದ ಹಿನ್ನೆಲೆಯಲ್ಲಿ, ರಾಜ್ಯ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ್ ಶೇಗಜಿ ಮತ್ತು ನಿರ್ದೇಶಕ ಚಿಂಚಳಿ ಅವರನ್ನು ಸಂಘದಿಂದ ಅಮಾನತುಗೊಳಿಸಲಾಗಿದೆ.
ಸಣ್ಣ ಗುತ್ತಿಗೆದಾರರೊಬ್ಬರಿಂದ ಸುಮಾರು 3% ರಷ್ಟು ಕಮಿಷನ್ ನೀಡುವಂತೆ ಜಗನ್ನಾಥ್ ಶೇಗಜಿ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಸುದ್ದಿಗೋಷ್ಠಿ ನಡೆಸಿ, “ಈ ವ್ಯವಹಾರವು ಖಾಸಗಿ ಜಾಗದಲ್ಲಿ ನಡೆದಿದೆ. ಇದಕ್ಕೂ ಸಂಘಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಸಂಘದ ಪಾರದರ್ಶಕತೆ ಕಾಪಾಡಲು ಇಬ್ಬರು ಪದಾಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಘೋಷಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ಜಗನ್ನಾಥ್ ಶೇಗಜಿ ತಳ್ಳಿಹಾಕಿದ್ದಾರೆ. “ನಾನು ಯಾವುದೇ ಕಮಿಷನ್ ಕೇಳಿಲ್ಲ. ಅಧಿಕಾರಿಗಳು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ನನ್ನ ಧ್ವನಿಯನ್ನು ಅಡಗಿಸಲು ಈ ರೀತಿ ಸುಳ್ಳು ಆರೋಪ ಮಾಡಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




