ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ವರುಣ ಆರ್ಭಟ ಜೋರಾಗಿದೆ. ಕಳೆದ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಚಿಂಚೋಳಿ ತಾಲೂಕಿನ ಹಲವಡೆ ಜಲಾವೃತವಾಗಿದೆ.
ಭಾರಿ ಮಳೆಯಿಂದ ಬೂತಪುರ ಬಳಿ ಸೇತುವೆ ತುಂಬಿ ಹರಿಯುತ್ತಿದ್ದು, ಬೂತಪುರ , ರುದ್ನೂರ, ರಾಯಕೋಡ, ಚಿಂತಪಳ್ಳಿ, ಬೆನಕೇಪಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾರ್ಥಿಗಳು, ವಾಹನ ಸವಾರರು ಪರವಾಡುವಂತಾಗಿದೆ.
ಚಿಂಚೋಳಿ ತಾಲೂಕಿನ ರತ್ನೂರು ಗ್ರಾಮದಲ್ಲಿ ಅಧಿಕ ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಳೆಯಿಂದ ಹಲವು ಕಡೆಯ ರಸ್ತೆಗಳು ಜಲಾವೃತಗೊಂಡಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ.
ಚಿಂಚೋಳಿ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ರುದ್ನೂರು ಗ್ರಾಮದ ಪ್ರಸಿದ್ಧ ತೋಂಟದಾರೆ ಸಿದ್ಧೇಶ್ವರ ದೇವಸ್ಥಾನ ಬಳಿಯ ನಾಲೆ ತುಂಬಿ ಹರಿಯುತ್ತಿದ್ದು, ನಾಲೆಯ ನೀರು ದೇವಸ್ಥಾನದ ಪ್ರಾಂಗಣಕ್ಕೂ ನೀರು ನುಗ್ಗಿದ್ದು ಸಂಪೂರ್ಣ ಜಲಾವೃತವಾಗಿದೆ.


