ಚಿತ್ರದುರ್ಗ : ಸಂತೆಮೈದಾನದ ಬಳಿ ಮೊಬೈಲ್ ಸ್ಕ್ರೀನ್ ಗಾರ್ಡ್ ಬದಲಿಸುವ ವಿಚಾರದಲ್ಲಿ ಉಂಟಾದ ಕ್ಷುಲ್ಲಕ ಜಗಳವೊಂದು ವಿಕೋಪಕ್ಕೆ ತಿರುಗಿ, ಮೊಬೈಲ್ ಅಂಗಡಿ ಮಾಲೀಕ ಹಾಗೂ ಸಂಘಪರಿವಾರದ ಕಾರ್ಯಕರ್ತ ವಿಕ್ರಮ್ ಚೌದ್ರಿ ಎಂಬುವವರಿಗೆ ಅನ್ಯಕೋಮಿನ ಯುವಕನೊಬ್ಬ ಚಾಕು ಇರಿದಿರುವ ಘಟನೆ ಭಾರಿ ಉದ್ವಿಗ್ನತೆಗೆ ಕಾರಣವಾಗಿದೆ.
ಕೇವಲ ನೂರು ರೂಪಾಯಿ ಹೆಚ್ಚುವರಿ ಹಣ ಕೇಳಿದ್ದಕ್ಕಾಗಿ ಗಾಂಜಾ ಮತ್ತಿನಲ್ಲಿದ್ದ ಆರೋಪಿಯು ಈ ಕೃತ್ಯ ಎಸಗಿದ್ದಾನೆ ಎಂದು ದೂರಲಾಗಿದ್ದು, ಘಟನೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಜಿಲ್ಲಾಸ್ಪತ್ರೆ ಬಳಿ ಟೈರ್ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ ಭಾರಿ ಆಕ್ರೋಶ ವ್ಯಕ್ತಪಡಿಸಿವೆ. ಗಾಯಾಳು ವಿಕ್ರಮ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾಳೆ ‘ಚಿತ್ರದುರ್ಗ ಬಂದ್’ ಮಾಡುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿರುವುದರಿಂದ ಕೋಟೆನಾಡಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


