ರಾಯಚೂರು : ವಿಧಾನಸಭಾ ಅಧಿವೇಶನ ಫೆ.12ರಿಂದ 23ರವರೆಗೆ ನಡೆಯಲಿದ್ದು, 16ರಂದು ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ನಗರದಲ್ಲಿ ಬುಧವಾರ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು 12ರಂದು ಭಾಷಣ ಮಾಡಲಿದ್ದಾರೆ. 15ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. 16ರಂದು ಬಜೆಟ್ ಮಂಡನೆಯಾಗಲಿದೆ. 23ರವರೆಗೂ ಬಜೆಟ್ ಮೇಲೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಫೆ. 9ರಂದು ಶಾಸಕರಿಗೆ ಹಾಗೂ ಪತ್ರಕರ್ತರಿಗೂ ಬಜೆಟ್ ಕುರಿತಾಗಿ ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್ನಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬಜೆಟ್ ಕುರಿತು ಮಹತ್ವದ ವಿಷಯಗಳ ತರಬೇತಿ ನೀಡಲಾಗುತ್ತದೆ ಎಂದರು.
ದಿಲ್ಲಿ ಚಲೋ ಪ್ರತಿಭಟನೆ ಕುರಿತ ಪ್ರೆಶ್ನಗೆ, ನಾನು ಸಭಾಪತಿಯಾಗಿರುವುದರಿಂದ ವಿಧಾನಸಭೆ ಒಳಗಿನ ವಿಚಾರ ಮಾತ್ರ ಮಾತನಾಡುತ್ತೇನೆ. ಒಳಗೆ ಚೆನ್ನಾಗಿ ಇರಬೇಕು. ಹೊರಗಡೆ ಸಹ ಸೌಹಾರ್ದಯುತವಾಗಿ ಇರಬೇಕು ಎಂದರು.
ವಿಧಾನಸಭೆ ನಡೆಯುವಾಗ ಎಲ್ಲಾ ಶಾಸಕರು ಭಾಗವಹಿಸಬೇಕು. ಜನಸಾಮಾನ್ಯರು ಮತಕೊಟ್ಟು ಅವರನ್ನ ವಿಧಾನಸಭೆಗೆ ಕಳುಹಿಸುತ್ತಾರೆ. ಅವರು ಅದನ್ನ ಅರ್ಥ ಮಾಡಿಕೊಳ್ಳಬೇಕು. ಅಧಿವೇಶನ ನಡೆಯುವಾಗ ಸಮಯಕ್ಕೆ ಸರಿಯಾಗಿ ಬರಬೇಕು. ಯಾವುದೇ ಕೆಲಸವಿರಲಿ ಅಥವಾ ಎಷ್ಟೆ ಕೆಲಸವಿದ್ದರೂ ಬದಿಗಿಟ್ಟು ವಿಧಾನಸಭೆಯಲ್ಲಿ ಹಾಜರಿರಬೇಕು. ಅಧಿವೇಶನದ ವೇಳೆ ಎಷ್ಟು ಚರ್ಚೆಯಲ್ಲಿ ಭಾಗವಹಿಸಿದರೂ ವಿಷಯ ಕೇಳಿಕೊಂಡು ಹೆಚ್ಚಿನ ಜ್ಞಾನ ಪಡೆದು ಯಶಸ್ವಿ ನಾಯಕರು ಆಗುತ್ತಾರೆ ಎಂದರು.